ರಾಜಕೀಯ

ಬಿ ಫಾರಂ ಇಲ್ಲದೆ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್

Lingaraj Badiger
ಹುಬ್ಬಳ್ಳಿ: ಕುಂದಗೋಳ ವಿಧಾನ ಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಎಸ್ ಐ ಚಿಕ್ಕನಗೌಡರ್ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಅಧಿಕೃತ ಘೋಷಣೆ ಆಗುವ ಮೊದಲೆ ಇಂದು ನಾಮಪತ್ರ ಸಲ್ಲಿಸುವ ಮೂಲಕ ಕುತೂಹಲ ಮೂಡಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಚಿಕ್ಕನಗೌಡರ್​ಗೆ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಸಮಿತಿ ತೀರ್ಮಾನ ಕೈಗೊಂಡು ವರಿಷ್ಠ ಮಂಡಳಿಗೆ ರವಾನಿಸಿದೆ ಎನ್ನಲಾಗಿದೆ. ಇತ್ತ ಬಿಜೆಪಿ ಕೋರ್ ಕಮಿಟಿಯಲ್ಲಿ ತಮಗೇ ಟಿಕೆಟ್ ನೀಡಲಿದ್ದಾರೆಂಬ ಮಾಹಿತಿ ಪಡೆದ ಚಿಕ್ಕನಗೌಡರ್ ಇಂದು ನಾಮಪತ್ರವನ್ನು ತರಾತುರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗೆ ಸಲ್ಲಿಸಿದ್ದಾರೆ.
ವಿಚಿತ್ರವೆಂದರೆ ಬಿಜೆಪಿ ಅಭ್ಯರ್ಥಿಗೆ ಪಕ್ಷದಿಂದ ಬಿ ಫಾರ್ಮ್​ ನೀಡಿಲ್ಲ. ಆದರೂ ಚಿಕ್ಕನಗೌಡರ್ ಗೆ ತಮಗೇ ಟಿಕೆಟ್ ಕೊಡುತ್ತಾರೆಂಬ ಸ್ಪಷ್ಟತೆ ಹಾಗೂ ಭರವಸೆ ಇದೆ ಎನ್ನಲಾಗಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್​ 29 ಕೊನೆಯ ದಿನವಾಗಿದ್ದು, ಇಂದು ಒಳ್ಳೆಯ ದಿನ ಎಂಬ ಕಾರಣಕ್ಕೆ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಪಕ್ಷದಿಂದ ಅಧಿಕೃತವಾಗಿ ಬಿ ಫಾರಂ ಪಡೆದು ಏಪ್ರಿಲ್​ 29ರಂದು ಬೃಹತ್​ ಮೆರವಣಿಗೆ ನಡೆಸಿ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿ.ಎಸ್‌.ಶಿವಳ್ಳಿ ಅವರ ವಿರುದ್ಧ ಚಿಕ್ಕನಗೌಡರ ಕೇವಲ 634 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಇದೀಗ ಮತ್ತೊಮ್ಮೆ ಅವರಿಗೆ ಪಕ್ಷ ಟಿಕೆಟ್​ ನೀಡಿದ್ದು, ಈ ಬಾರಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ದಿವಂಗತ ಸಿಎಸ್​ ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಮೇ 19ರಂದು ಉಪ ಚುನಾವಣೆ ನಡೆಯಲಿದೆ.
ಎಸ್.ಐ.ಚಿಕ್ಕನಗೌಡರ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿಯಾಗಿದ್ದು, ಅವರಿಗೆ ಟಿಕೆಟ್ ನೀಡುವ ಭರವಸೆ ರಾಜ್ಯಾದ್ಯಕ್ಷರಿಂದ ದೊರಕಿದೆ ಎನ್ನಲಾಗಿದೆ.
SCROLL FOR NEXT