ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಪ್ರಕರಣದಲ್ಲಿ ಹತ್ಯೆಯಾದ ಯುವಕರ ಕುಟುಂಬಕ್ಕೆ ಸಾಂತ್ವನ ಹೇಳುವ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವಂದ್ವ ನೀತಿ ಅನುಸರಿಸಿದೆ.
ಕಾಂಗ್ರೆಸ್ ನಾಯಕರಿಗೆ ಕಾನೂನು ಸುವ್ಯವಸ್ಥೆ, ನಿರ್ಬಂಧಕಾಜ್ಞೆ ಅಡ್ಡಿಪಡಿಸಿದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿಗೆ ಯಾವುದೇ ತಡೆಯೊಡ್ಡದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಕಳೆದ ಮೂರು ದಿನಗಳಿಂದ ಮಂಗಳೂರಿನ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಕಾಂಗ್ರೆಸ್ ನಾಯಕರಿಗೆ ಪೊಲೀಸರು ಹಾಗೂ ಸ್ಥಳೀಯ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಹೃದಯ ರಕ್ತನಾಳ ಚಿಕಿತ್ಸೆಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಂಸದರಿಗೆ ಬಿಜೆಪಿ ಸರ್ಕಾರ ಹಾಗೂ ಪೊಲೀಸರು ಅಡ್ಡಿಪಡಿಸಿದರು.
ವಿಪರ್ಯಾಸ ಹಾಗೂ ಆಶ್ಚರ್ಯದ ವಿಷಯವೆಂದರೆ ಇಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳೂರಿಗೆ ಭೇಟಿ ನೀಡಿದರು. ಮಾಜಿ ಮುಖ್ಯಮಂತ್ರಿಗೆ ಮಂಗಳೂರು ಪೊಲೀಸ್ ಕಮಿಷನರ್ ವಿಮಾನ ನಿಲ್ದಾಣ ಕ್ಕೆ ಆಗಮಿಸಿ ಸ್ವಾಗತ ಕೋರಿದ್ದಾರೆ.
144 ನಿಷೇಧಾಜ್ಞೆ ನಡುವೆಯೇ ಗಲಭೆಯಲ್ಲಿ ಹತ್ಯೆಯಾದ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಜೆಡಿ ಎಸ್ ಪಕ್ಷದಿಂದ 1 ಲಕ್ಷರೂ ಪರಿಹಾರದ ಚೆಕ್ ನೀಡಿದರು. ಗಲಭೆಯಲ್ಲಿ ಗಾಯಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ ಸಮಾಧಾನ ಹೇಳಿ ಬಂದಿದ್ದಾರೆ. ವಿಮಾನ ನಿಲ್ದಾಣದಿಂದ ಕುಮಾರಸ್ವಾಮಿ, ಎಂಎಲ್ ಸಿ ಭೋಜೇಗೌಡ, ಎಂಎಲ್ ಸಿ ಬಿ.ಎಂ.ಫಾರೂಕ್ ಮೂವರೇ ಆಗಮಿಸಿದರು.