ರಾಜಕೀಯ

ಏಸು ವಿವಾದ ಮುಂದುವರೆಸಬೇಡಿ: ಸಚಿವರಿಗೆ ಸಿಎಂ ಯಡಿಯೂರಪ್ಪ ತಾಕೀತು

Manjula VN

ಬೆಂಗಳೂರು: ಕನಕಪುರ ಕಪಾಲ ಬೆಟ್ಟದಲ್ಲಿ 114 ಅಡಿಯ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸುವ ವಿಚಾರದಲ್ಲಿ ಮಾಜಿ ಸಚಿವ ಡಿಕೆ. ಶಿವಕುಮಾರ್ ಅವರನ್ನು ಗುರಿಯಾಗಿರಿಸಿಕೊಂಡು ರಾಜಕೀಯ ಟೀಕೆ ಮಾಡುವುದು ಬೇಡ ಎಂದು ಮುಖ್ಯಮಂತ್ರಿಯಡಿಯೂರಪ್ಪ ಅವರು ತಮ್ಮ ಸಂಪುಟದ ಸಚಿವರಿಗೆ ಸಲಹೆ ನೀಡಿದ್ದಾರೆ. 

ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಅವರು, ಮಾಜಿ ಸಚಿವ ಡಿಕೆ.ಶಿವಕುಮಾರ್ ಅವರನ್ನು ಈ ವಿಚಾರದಲ್ಲಿ ಗುರಿಯಾಗಿಸಿಸಿಕೊಂಡು ಟೀಕೆ ಮಾಡುವುದು ಬೇಡ. ಇದರಿಂದ ಒಂದು ಧರ್ಮವನ್ನು ಸಂಪೂರ್ಣವಾಗಿ ಬಿಜೆಪಿಯಿಂದ ದೂರ ಮಾಡಿಕೊಂಡಂತಾಗಲಿದೆ. 

ಜೊತೆಗೆ ಇದು ಪರೋಕ್ಷವಾಗಿ ಡಿಕೆ.ಶಿವಕುಮಾರ್ ಅವರಿಗೆ ನೆರವಾಗುವ ಸಾಧ್ಯತೆಯೂ ಇದೆ. ಹೀಗಾಗಿ ಬಹಿರಂಗಾಗಿ ರಾಜಕೀಯ ಟೀಕೆ ಮಾಡುವ ಬದಲು ಕಾನೂನು ಬಾಹಿರವಾಗಿ ಜಮೀನು ಮಂಜುರಾಗಿದ್ದಾರೆ ಕಂದಾಯ ಇಲಾಖೆಯಿಂದ ಕ್ರಮ ಕೈಗೊಳ್ಳಬಹುದು. ಇದನ್ನು ರಾಜಕೀಯವಾಗಿ ಬಳಸಿಕೊಂಡರೆ, ಅದು ತಿರುಗುಬಾಣವಾಗಬಹುದು ಎಂದು ಹೇಳಿದ್ದಾರೆಂದು ವರದಿಗಳು ತಿಳಿಸಿವೆ. 

ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ 114 ಅಡಿಯ ಏಕಶಿಲಾ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಶಿವಕುಮಾರ್ ಡಿ.25ರ ಕ್ರಿಸ್ ಮಸ್ ದಿನ ಶಂಕುಸ್ಥಾಪನೆ ಮಾಡಿದ್ದರು. ಅಲ್ಲದೆ. ಹಿಂದಿನ ಸರ್ಕಾರದಲ್ಲಿ ಸರ್ಕಾರದಿಂದ ಮಂಜೂರು ಮಾಡಲಾಗಿದ್ದ 10 ಎಕರೆ ಜಾಗಕ್ಕೆ ಡಿಕೆಶಿ ಅವರೇ ಹಣ ಪಾವತಿಸಿದ್ದರು. 

ಈ ಬಗ್ಗೆ ಬಿಜೆಪಿ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಇಟಲಿಯಮ್ಮನ ಮೆಚ್ಚಿಸುವ ಸಲುವಾಗಿ ಶಿವಕುಮಾರ್ ಏಸುಕಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಹೊರಟಿದ್ದಾರೆಂದು ಹೇಳಿದ್ದರು. 

SCROLL FOR NEXT