ರಾಜಕೀಯ

ಗದ್ದಲದ ನಡುವೆಯೇ ಹಣಕಾಸು ಮಸೂದೆಗೆ ವಿಧಾನಸಭೆ ಅನುಮೋದನೆ

Lingaraj Badiger
ಬೆಂಗಳೂರು: ಬಿಜೆಪಿ ಸದಸ್ಯರ ಧರಣಿ, ಗದ್ದಲದ ನಡುವೆಯೇ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮತ್ತು ಹಣಕಾಸು ಮಸೂದೆಗಳಿಗೆ ಗುರುವಾರ ವಿಧಾನಸಭೆ ಅನುಮೋದನೆ ನೀಡಿದೆ. 
ರಾಜ್ಯಪಾಲ ವಜೂಭಾಯಿ ವಾಲಾ ಅವರು ಈ ತಿಂಗಳ 6 ರಂದು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ್ದ ಭಾಷಣದ ಮೇಲಿನ ವಂದನೆ ಸಲ್ಲಿಸುವ ನಿರ್ಣಯ ಕುರಿತ ಪ್ರಸ್ತಾವವನ್ನು ಧರಣಿ ನಡುವೆಯೇ ಅಂಗೀಕರಿಸಲಾಯಿತು. 
2019 - 2020ನೇ ಸಾಲಿನ 80168 ಕೋಟಿ ರೂ ಲೇಖಾನುದಾನ ಹಾಗೂ 14581 ಕೋಟಿ ರೂ ಪೂರಕ ಅಂದಾಜು ಧನ ವಿನಿಯೋಗ ಕುರಿತ ಹಣಕಾಸು ಮಸೂದೆಗಳಿಗೆ ಸದನ ಅಂಗೀಕರಿಸಿದೆ.
ಹಣಕಾಸು ಇಲಾಖೆಯ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಬಿಜೆಪಿ ಸದಸ್ಯರ ಧರಣಿ ಮತ್ತು ಪ್ರತಿಭಟನೆ ನಡುವೆಯೇ ಮಸೂದೆಗಳನ್ನು ಮಂಡಿಸಿದರು. ಸಭಾಧ್ಯಕ್ಷ ರಮೇಶ್ ಕುಮಾರ್ ಮಸೂದೆಗಳನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಈ ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ ಮುಕ್ತಾಯವಾಯಿತು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಳೆದ ಶುಕ್ರವಾರ 2.34 ಲಕ್ಷ ಕೋಟಿ ರೂ ಮೊತ್ತದ 2019 - 20 ನೇ ಸಾಲಿನ ಆಯವ್ಯಯ ಮಂಡಿಸಿದ್ದರು.
ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ನಿವಾಸದ ಮೇಲೆ ಜೆಡಿಎಸ್ ಕಾರ್ಯಕರ್ತರು ದಾಳಿ ನಡೆಸಿರುವ ಪ್ರಕರಣವನ್ನು ಮುಂದಿಟ್ಟುಕೊಂಡು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು. ಧರಣಿ ನಡುವೆಯೇ ಮಸೂದೆಗಳಿಗೆ ಅನುಮೋದನೆ ದೊರೆಯಿತು.
SCROLL FOR NEXT