ಬೀದರ್: ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ಸೊಲ್ಲಾಪುರಕ್ಕೆ ತೆರಳುವ ಸಂದರ್ಭದಲ್ಲಿ ಬೀದರ್ ನ ವಾಯುಪಡೆ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲಾಯಿತು,
ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು, ಕಾಶೆಂಪೂರ್ ಅವರ ಜೊತೆ ಕೆಲ ಮಾತನಾಡಿದ ಪ್ರಧಾನಿ ಮಾಜಿ ಪಿಎಂ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.
ಬೀದರ್ ವಾಯು ನೆಲೆಯಲ್ಲಿ ಬುಧವಾರ ಬೆಳಗ್ಗೆ 9.40ರ ಸುಮಾರಿಗೆ ಬಂದಿಳಿದ ಪ್ರಧಾನಿ ಮೋದಿ ಅವರಿಗೆ ಹೂ ನೀಡಿ, ಕೈ ಕುಲುಕಿದ ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಅವರು, ''ಐ ಆ್ಯಮ್ ಫ್ರಮ್ ಎಚ್.ಡಿ. ದೇವೇಗೌಡ ಪಾರ್ಟಿ ಮಿನಿಸ್ಟರ್,'' (ನಾನು ಎಚ್.ಡಿ. ದೇವೇಗೌಡರ ಪಕ್ಷದ ಸಚಿವ) ಎಂದು ಪರಿಚಯಿಸಿಕೊಂಡರು.
ಇದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, ''ಹೌ ಈಸ್ ಮೈ ಬೆಸ್ಟ್ ಫ್ರೆಂಡ್, ಆ್ಯಂಡ್ ಹೌ ಈಸ್ ಹಿಸ್ ಹೆಲ್ತ್,'' (ನನ್ನ ಅತ್ಯುತ್ತಮ ಗೆಳೆಯ ಹೇಗಿದ್ದಾರೆ, ಅವರ ಆರೋಗ್ಯ ಹೇಗಿದೆ) ಎಂದು ಕೇಳಿದರು. ''ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಆರೋಗ್ಯವನ್ನೂ ವಿಚಾರಿಸಿದ ಮೋದಿ ಅವರು, ನಗುಮುಖದಿಂದ, ಆತ್ಮೀಯತೆಯಿಂದಲೇ ಮಾತನಾಡಿದರು. ಅದು ಅವರ ಸರಳತನವನ್ನು ಬಿಂಬಿಸುತ್ತದೆ,'' ಎಂದೂ ಸಚಿವ ಬಂಡೆಪ್ಪ ಖಾಶೆಂಪುರ ಅವರು ತಿಳಿಸಿದರು.
ರಾಜ್ಯ ಸರಕಾರದ ಪರವಾಗಿ ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ, ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ್, ಕ್ರೀಡಾ ಮತ್ತು ಯುವ ಸಬಲೀಕರಣ ಖಾತೆ ಸಚಿವ ರಹಿಂ ಖಾನ್ ಅವರುಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಂಡರು.