ಕೋಲಾರ: ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್-ಜೆಡಿಎಸ್ ನಡುವೆ ಹೊಂದಾಣಿಕೆಯಿಲ್ಲ, ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸರ್ಕಾರದ ಅಗತ್ಯತೆಯಿದೆ, ಹೀಗಾಗಿ ನಾನು ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದೇನೆ ಎಂದು ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್ ತಿಳಿಸಿದ್ದಾರೆ.
ನಾನು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದರೂ, ನನಗೆ ಕಾಂಗ್ರೆಸ್ ಯಾವುದೇ ಗೌರವ ನೀಡಿಲ್ಲ, ಕಾಂಗ್ರೆಸ್ ನಾಯಕರು ಕೇವಲ ಅಶ್ವಾಸನೆ ನೀಡುತ್ತಾರೆ, ಆದರೆ ಯಾವುದೇ ಭರವಸೆಯನ್ನು ಈಡೇರಿಸುವುದಿಲ್ಲ, ನನ್ನ ಮುಳಬಾಗಿಲು ಕ್ಷೇತ್ರಕ್ಕೆ ಯಾವುದೇ ರೀತಿಯ ಅನುದಾನ ನೀಡದೇ ಅಭಿವೃದ್ಧಿ ಕೆಲಸಗಳನ್ನು ನಿರ್ಲಕ್ಷ್ಯಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಒಬ್ಬ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಿಕೊಡಲು ಸಮ್ಮಿಶ್ರ ಸರ್ಕಾರ 3 ತಿಂಗಳ ಸಮಯ ಪಡೆಯಿತು.ಸರ್ಕಾರದ ರಚನೆ ಸಮಯದ ವೇಳೆ ನೀಡಿದ್ದ ಭರವಸೆಯನ್ನು ಮೈತ್ರಿ ಪಕ್ಷಗಳು ಮರೆತಿವೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಕೂಡ ನೀಡಿದ್ದ ಭರವಸೆ ಈಡೇರಿಸುವುದನ್ನು ಮರೆತಿದ್ದಾರೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಾನು ನನ್ನ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸೇರಿದಂತೆ, ತಾವು ಇದುವರೆಗೂ ಯಾವುದೇ ಬಿಜೆಪಿ ಶಾಸಕರನ್ನು ಭೇಟಿ ಮಾಡಿಲ್ಲ,
ಹೊಸ ಸರ್ಕಾರ ರಚನೆಗಾಗಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ, ಆದರೆ ಬಿಜೆಪಿ ತಮಗೆ ಯಾವುದೇ ಹಣ ಅಥವಾ ಭರವಸೆ ನೀಡಿಲ್ಲ ಎಂದು ಹೇಳಿದ್ದಾರೆ.
ಇನ್ನೂ ತಾವು ಸಚಿವ ಡಿ,ಕೆ ಶಿವಕುಮಾರ್ ಅವರನ್ನೂ ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ, ಇನ್ನೂ ನಾಗೇಶ್ ಶಾಸಕರಾಗಲು ಕಾಂಗ್ರೆಸ್ ಕಾರಣ, ಮಾಜಿ ಶಾಸಕ ಕೊತೂರು ಮಂಜುನಾಥ್, ನಾಗೇಶ್ ಅವರ ಪರವಾಗಿ ಪ್ರಚಾರ ಮಾಡಿದ್ದರು, ಹೀಗಾಗಿ ನಾಗೇಶ್ ಗೆಲುವು ಸಾಧ್ಯವಾಯಿತು, ಅವರನ್ನು ಪಕ್ಷಕ್ಕೆ ಕರೆತರಲು ಪ್ರಯತ್ನಿಸುತ್ತೇವೆ ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಾ ರೆಡ್ಡಿ ಹೇಳಿದ್ದಾರೆ.