ಬಳ್ಳಾರಿ: ಕಂಪ್ಲಿ ಶಾಸಕ ಜೆಎನ್ ಗಣೇಶ್ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿರುವ ವಿಷಯ ತಿಳಿದು ಬಳ್ಳಾರಿ ಜನತೆ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಈಗಲ್ ಟನ್ ರೆಸಾರ್ಟ್ ನಲ್ಲಿ ಮಧ್ಯದ ಅಮಲಿನಲ್ಲಿದ್ದ ಗಣೇಶ್, ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ್ದರು.
ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗಣೇಶ್ ಅವರನ್ನು ರಾಜಕೀಯಕ್ಕೆ ತರುವ ಸಂಪೂರ್ಣ ಜವಾಬ್ದಾರಿಯನ್ನು ಆನಂದ್ ಸಿಂಗ್ ವಹಿಸಿಕೊಂಡಿದ್ದರು. ಆನಂದ್ ಸಿಂಗ್ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಸೂರ್ಯನಾರಾಯಣ ರೆಡ್ಡಿ ಗಣೇಶ್ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ಗರು. ಇವರಿಬ್ಬರೂ ಒಗ್ಗೂಡಿ ಶಾಸಕ ಶ್ರಿರಾಮುಲು ಸೋದರಳಿಯ ಸುರೇಶ್ ಬಾಬು ಅವರನ್ನು ಸೋಲಿಸಿದ್ದರು.
ಬಳ್ಳಾರಿಯಲ್ಲಿ ರೆಡ್ಡಿ ಸೋದರರ ಪ್ರಾಬಲ್ಯ ಹತ್ತಿಕ್ಕಲು ಸಂತೋಷ್ ಲಾಡ್ ಕೂಡ ಕೈ ಜೋಡಿಸಿದ್ದರು. ಸದ್ಯ ಜಿಲ್ಲೆಯ ಜನರಿಗೆ ಕಾಡುತ್ತಿರುವ ಪ್ರಶ್ನೆ, ತಮ್ಮ ರಾಜಕೀಯ ಗುರುವಿನ ಮೇಲೆ ಏಕೆ ಗಣೇಶ್ ಹಲ್ಲೆ ನಡೆಸಿದರು ಎಂಬುದು, ಗಣೇಶ್ ಆ ರೀತಿಯ ಕೆಲಸ ಮಾಡಲು ಸಾಧ್ಯವಿಲ್ಲ, ಅವರನ್ನು ಯಾರೋ ಪ್ರಚೋದಿಸಿ ಕುಮ್ಮಕ್ಕು ನೀಡಿದ್ದಾರೆ, ಇದಕ್ಕೆ ಭೀಮಾ ನಾಯಕ್ ಕಾರಣ ಎಂದು ಆನಂದ್ ಸಿಂಗ್ ಬೆಂಬಲಿಗರು ಆರೋಪಿಸಿದ್ದಾರೆ.
ಇದಕ್ಕೆಲ್ಲಾ ಕಾರಣ ಹರಿಗಬೊಮ್ಮನಹಳ್ಳಿ ಶಾಸಕ ಭೀಮಾ ನಾಯಕ್ ಕಾರಣ ಎಂದು ಆರೋಪಿಸಲಾಗಿದೆ, ಕಳೆದ ಕೆಲವು ವರ್ಷಗಳಿಂದ ಭೀಮಾ ನಾಯ್ ಮತ್ತು ಆನಂದ್ ಸಿಂಗ್ ನಡುವೆ ಶೀತಲ ಸಮರ ನಡೆಯುತ್ತಿತ್ತು. ಹಗರಿಬೊಮ್ಮನ ಹಳ್ಳಿಯಲ್ಲಿರುವ ಆನಂದ್ ಸಿಂಗ್ ಅಭಿಮಾನಿ ಬಳಗದ ಕಚೇರಿಗೆ ಹೊಸಪೇಟೆ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಭೇಟಿ ನೀಡಿದ್ದರು. ಈ ಅಭಿಮಾನಿ ಸಂಘದ ಕಚೇರಿ ಭೀಮಾನಾಯಕ್ ಮನೆ ಮುಂದಿತ್ತು. ಯಾರೋ ಕಿಡಿಕೇಡಿಗಳು ಕಚೇರಿ ಮುಂಭಾಗದಲ್ಲಿರುವ ಆನಂದ್ ಸಿಂಗ್ ಕಟೌಟ್ಗೆ ಚಪ್ಪಲಿ ಹಾರ ಹಾಕಿದ್ದರು.
ಇತ್ತೀಚೆಗೆ ನಡೆದ ಲೋಕಸಭೆ ಉಪ ಚುನಾವಣೆ ಸಂದರ್ಭದಲ್ಲೂ ಇವರ ಜಿದ್ದಾಜಿದ್ದಿ ಮುಂದುವರೆದಿತ್ತು, ಜೊತೆಗೆ ಸಂಪುಟ ವಿಸ್ತರಣೆ ವೇಳೆ ಅವಕಾಶ ಕೊಡದಿದ್ದಕ್ಕೆ ಭಾರೀ ಅಸಮಾಧಾನ ಭುಗಿಲೆದ್ದಿತ್ತು, ಹೀಗಾಗಿ ನಾಗೇಂದ್ರ, ಗಣೇಶ್, ಭೀಮಾ ನಾಯಕ್ ಬಿಜೆಪಿ ಸೇರಲು ನಿರ್ಧರಿಸಿದ್ದರು, ಆದರೆ ಆನಂದ್ ಸಿಂಗ್ ಇದನ್ನು ವಿರೋಧಿಸಿದ್ದರು ಎಂದು ಹೇಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos