ರಾಜಕೀಯ

ಪ್ರಬುದ್ಧ ಆಡಳಿತದಲ್ಲಿ ಸಿಎಂ ಕುಮಾರಸ್ವಾಮಿ ಪಿಎಚ್‌ಡಿ: ಕಾಂಗ್ರೆಸ್ ಗೆ ಸಿ.ಎಸ್ ಪುಟ್ಟರಾಜು ಟಾಂಗ್

Shilpa D
ಬೆಂಗಳೂರು: ಸಮ್ಮಿಶ್ರ ಸರ್ಕಾರ ಹಾಗೂ ಪ್ರಬುದ್ಧ ಆಡಳಿತ ನಡೆಸುವುದರಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪಿಎಚ್ ಡಿ ಪಡೆದಿದ್ದಾರೆ ಎಂದು ಸಚಿವ ಸಿಎಸ್‌ ಪುಟ್ಟರಾಜು ತಿರುಗೇಟು ನೀಡಿದ್ದಾರೆ.  
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಮೆಚ್ಯುರಿಟಿ ಇಲ್ಲ ಎಂದು ಹೇಳಿಕೆ ನೀಡಿರುವ ಮಾಜಿ ಸಚಿವ ಬಸವರಾಜ ರಾಯ ರೆಡ್ಡಿ ವಿರುದ್ಧ ಹರಿ ಹಾಯ್ದಿದ್ದಾರೆ. ರಾಯರೆಡ್ಡಿ ಮೊದಲು ತಮ್ಮ ಮೂಲ ಯಾವುದು ಎಂಬುದನ್ನು ಅರಿತು ಮಾತನಾಡಲಿ ಎಂದು ಕಿಡಿ ಕಾರಿದ್ದಾರೆ.
ದೆಹಲಿಯ ವಿಶೇಷ ಪ್ರತಿನಿಧಿಯಾಗಿ ಶಾಸಕ ಅಜಯ್ ಸಿಂಗ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರಿಂದಲೇ ಜೆಡಿಎಸ್ ನಾಯಕರು ಯಾರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಎಂದು ಅವರು ಸರ್ಕಾರದೊಳಗಿನ ಅಸಮಾಧಾನವನ್ನು ಬಹಿರಂಗಗೊಳಿಸಿದ್ದಾರೆ.
ಅಜಯ್ ಸಿಂಗ್ ಪದಗ್ರಹಣ ಕಾರ್ಯಕ್ರಮಕ್ಕೆ ತಮಗೆ ಆಹ್ವಾನವೂ ಬಂದಿತ್ತು. ತಾವು ಕಾರ್ಯಕ್ರಮಕ್ಕೆ ಹೋಗಬೇಕು ಎಂದುಕೊಂಡಿದ್ದೆವು. ಆದರೆ, ಸಿದ್ದರಾಮಯ್ಯ ಅವರನ್ನು ಕೂಡಿಸಿಕೊಂಡು ಕಾಂಗ್ರೆಸ್ ಶಾಸಕರು,  ಜೆಡಿಎಸ್ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿದರೆ ಬೇಸರ ಆಗುತ್ತದೆ ಎಂಬ ಕಾರಣದಿಂದ ಮನಸ್ಸಿದ್ದರೂ ಕಾರ್ಯಕ್ರಮದಿಂದ ದೂರ ಉಳಿಯಬೇಕಾಯಿತು ಎಂಬ ಸಂಗತಿಯನ್ನು ಹೊರ ಹಾಕಿದರು.
SCROLL FOR NEXT