ಬೆಂಗಳೂರು: ರೆಸಾರ್ಟ್ ನಿಂದ ರೆಸಾರ್ಟ್ ಗೆ ಜಿಗಿಯುತ್ತಿರುವ ಅತೃಪ್ತ ಶಾಸಕರ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿದ್ದರೆ, ಇತ್ತ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಗಳೂರಿನಲ್ಲೇ ಇರುವ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಮುಂದಿನ ನಡೆಯ ಬಗ್ಗೆಯೂ ಅಷ್ಟೇ ಕುತೂಹಲ ಮೂಡಿದೆ.
ಈ ನಡುವೆ ಬಿಜೆಪಿ ನಾಯಕ ಎಸ್.ಕೆ ನಟರಾಜ್ ರಾಮಲಿಂಗಾ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿರುವುದು ಮತ್ತಷ್ಟು ಕುತೂಹಲ ಮೂಡಿಸಿದ್ದು, ರಾಮಲಿಂಗಾ ರೆಡ್ಡಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಮೂಡಿಸಿದೆ.
ಎಸ್ ಕೆ ನಟರಾಜ್ ಭೇಟಿ ನಂತರ ಖಾಸಗಿ ಸುದ್ದಿವಾಹಿನಿಯ ಪ್ರತಿನಿಧಿಯೊಂದಿಗೆ ಮಾತನಾಡಿರುವ ರಾಮಲಿಂಗಾ ರೆಡ್ಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಆದರೆ ನಾನಿನ್ನೂ ಕಾಂಗ್ರೆಸ್ ನಲ್ಲಿದ್ದೀನಿ, ಸಚಿವ ಸ್ಥಾನಕ್ಕೆ ಕೇಳಿಲ್ಲ. ನಾನಾಗಿಯೇ ಪಕ್ಷದ ನಾಯಕರೊಂದಿಗೆ ಮಾತನಾಡುವುದಿಲ್ಲ. ಅವರು ಬಂದರೆ ಮಾತನಾಡುತ್ತೇನೆ, ಬಿಜೆಪಿಗೆ ಹೋಗಲ್ಲ. ಪಕ್ಷದ ಬೆಳವಣಿಗೆಯಿಂದ ಬೇಸರಗೊಂಡು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ. .