ಬೆಂಗಳೂರು: ತಾವೇಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿರುವ ಸಚಿವ ಆರ್ ವಿ ದೇಶಪಾಂಡೆ ಅವರು, ಯಾವುದೇ ಕಾರಣಕ್ಕೂ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದು, ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ಪತ್ರವನ್ನು ನೀಡಿದ್ದೇವೆ. ಅವರು ಯಾವ ಕ್ಷಣದಲ್ಲಿ ಬೇಕದರೂ ನಿರ್ಧಾರ ಕೈಗೊಂಡು ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರ ಹಸ್ತಾಂತರಿಸಲು ಸ್ವತಂತ್ರರಿದ್ದಾರೆ .ಮೈತ್ರಿ ಸರ್ಕಾರದ ರಕ್ಷಣೆಗಾಗಿ ಕಾಂಗ್ರೆಸ್ ನಾಯಕರು ಎಲ್ಲಾ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ತಾವು ಶಾಸಕ ಸ್ಥಾನ ತೊರೆಯುವ ಪ್ರಶ್ನೆಗೆ ಉತ್ತರಿಸಿದ ಅವರು ನಾನೇಕೆ ರಾಜೀನಾಮೆ ನೀಡಬೇಕು ಎಂದು ಕೇಳಿದರು. ಇನ್ನು ಈಗಾಗಲೇ ತಮ್ಮ ಅತೃಪ್ತ ನಡೆಯನ್ನು ಹೊರಹಾಕಿದ್ದು, ಈ ಪಟ್ಟಿಯಲ್ಲಿ ತಾವು ಇದ್ದೇವೋ ಇಲ್ಲವೋ ಎನ್ನುವುದಕ್ಕೆ ಉತ್ತರಿಸಲು ಇದು ಸಮಯ ಅಲ್ಲ ಎಂದರು.
ಶಾಸಕರ ಅನರ್ಹತೆ ಸಂಬಂಧ ಅತೃಪ್ತರ ಶಾಸಕರ ವಿರುದ್ಧ ಕಾಂಗ್ರೆಸ್ ಶಾಸಕಾಂಗ ನಾಯಕರು ಸ್ಪೀಕರ್ ಗೆ ದೂರು ನೀಡಿದ್ದಾರೆ. ಅಧಿವೇಶನದ ವೇಳೆ ಶಾಸಕರು ವಿಪ್ ಉಲ್ಲಂಘನೆ ಮಾಡಿದರೆ ಆಗ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗಲಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಅಧಿವೇಶನ ವೇಳೆ ಎಲ್ಲ ಪಕ್ಷದ ಮುಖ್ಯ ಸಚೇತಕರು ಶಾಸಕರಿಗೆ ವಿಪ್ ಜಾರಿ ಮಾಡುತ್ತಾರೆ. ಅದರಲ್ಲೇನು ವಿಶೇಷತೆ ಇಲ್ಲ. ಅದೇ ರೀತಿ ವಿಪ್ ಜಾರಿ ಮಾಡಿದ್ದೇವೆ. ವಿಪ್ ಉಲ್ಲಂಘನೆ ಮಾಡಿದ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಅವಕಾಶವಿದೆ ಎಂದರು.