ಬೆಂಗಳೂರು: ವಿಶ್ವಾಸಮತ ಯಾಚನೆ ಮಾಡುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಘೋಷಣೆ ಮಾಡಿದ ಬಳಿಕ ಬಿಜೆಪಿ ಯಾವ ನಿಲುವು ತಳೆಯಲಿದೆ, ನಾವೇನು ಮಾಡಬೇಕು ಎಂಬ ಗೊಂದಲದಲ್ಲಿಯೇ ಕಾಂಗ್ರೆಸ್ ಶಾಸಕರು ಸೋಮವಾರ ವಿಧಾನಸಭೆ ಕಲಾಪಕ್ಕೆ ಆಗಮಿಸಿದ್ದರು.
ಆಡಳಿತ ಪಕ್ಷವೋ, ಪ್ರತಿಪಕ್ಷವೋ ಎನ್ನುವ ಜಿಜ್ಞಾಸೆಯಲ್ಲಿದ್ದ ಶಾಸಕರಿಗೆ ಸ್ವತಃ ಶಾಸಕಾಂಗ ನಾಯಕ ಸಿದ್ದರಾಮಯ್ಯ ಧೈರ್ಯ ತುಂಬಿ, ಏನೇ ಬಂದರೂ ಎದುರಿಸಲು ಸಿದ್ಧರಾಗಿ ಎಂದು ಧೈರ್ಯ ತುಂಬಿದರು.
ಬೆಳಿಗ್ಗೆ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿರುವ ಖಾಸಗಿ ಹೋಟೆಲ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಗೊಂದಲದಲ್ಲಿದ್ದ ಶಾಸಕರಲ್ಲಿ ಸಿದ್ದರಾಮಯ್ಯ ಆತ್ಮ ವಿಶ್ವಾಸ ತುಂಬುವ ಪ್ರಯತ್ನ ಮಾಡಿದರು. ಪಕ್ಷ ತೊರೆದು ಹೋಗುವವರೆಲ್ಲಾ ಹೋಗಲಿ. ಉಳಿದಿರುವ ನಾವು ಒಟ್ಟಾಗಿರೋಣ, ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ಪ್ರತಿಪಕ್ಷದಲ್ಲಿ ಕುಳಿತುಕೊಂಡು ಪಕ್ಷ ಸಂಘಟನೆ ಹಾಗೂ ಸರ್ಕಾರದ ವಿರುದ್ಧ ಹೋರಾಟ ಮಾಡೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಬಿಜೆಪಿ ಅಧಿಕಾರಕ್ಕೆ ಏರಿದರೂ ಹೆಚ್ಚು ದಿನ ಸರ್ಕಾರ ನಡೆಸಲು ಸಾಧ್ಯವಿಲ್ಲ. ಇಂತಹ ಸಂದಿಗ್ದ ಪರಿಸ್ಥಿತಿ ಲಾಭ ಪಡೆದುಕೊಂಡು ಪಕ್ಷ ಸಂಘಟನೆ ಹಾಗೂ ಮುಂದಿನ ಚುನಾವಣೆಗೆ ತಯಾರಿ ನಡೆಸಿಕೊಳ್ಳುವುದು ಸೂಕ್ತ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿವೆ.
ಮುಂಬೈಗೆ ತೆರಳಿರುವ ಶಾಸಕರ ಮನವೊಲಿಕೆ ಹಾಗೂ ರಾಜೀನಾಮೆ ನೀಡಿರುವ ರಾಮಲಿಂಗಾ ರೆಡ್ಡಿ, ಎಂ.ಟಿ.ಬಿ. ನಾಗರಾಜ್ ಸೇರಿದಂತೆ ಯಾರನ್ನು ಮನವೊಲಿಸುವುದು ಬೇಡ ಎಂದು ಬಹುತೇಕ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಜನ ಅಧಿಕಾರಕ್ಕಾಗಿ ಪಕ್ಷ ಹಪಾಹಪಿಸುತ್ತಿದೆ. ಎಂತಹ ದೈನೇಸಿ ಸ್ಥಿತಿಗೆ ತಲುಪಿದೆ ಎಂದು ಟೀಕೆ ಮಾಡುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಅತೃಪ್ತ ಶಾಸಕರ ಮನವೊಲಿಕೆ ಕೈಬಿಟ್ಟು ಮುಂದಿನ ಹೋರಾಟದತ್ತ ಚಿಂತನೆ ನಡೆಸುವುದು ಸೂಕ್ತ ಎಂದು ಸಿದ್ದರಾಮಯ್ಯ ಅವರಿಗೆ ಶಾಸಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕರು ಮುಂಬೈಗೆ ತೆರಳಲಿದ್ದಾರೆ ಎಂಬ ಮಾಹಿತಿ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.
ಈ ಹಿಂದೆ ಸಚಿವ ಡಿಕೆ ಶಿವಕುಮಾರ್ ಮುಂಬೈಗೆ ತೆರಳಿದಾಗ ಒಳಗೆ ಬಿಟ್ಟುಕೊಳ್ಳದೆ ಬೀದಿ ಬದಿಯಲ್ಲಿಯೇ ಕುಳಿತು ವಾಪಸ್ಸಾಗುವಂತಾಯಿತು. ಹೀಗಾಗಿ ಅಪಮಾನ ಮಾಡಿಸಿಕೊಳ್ಳಲು ಅಲ್ಲಿಯವರೆಗೆ ತೆರಳುವ ಅಗತ್ಯವಿಲ್ಲ. ಯಾವುದೇ ನಾಯಕರು ಮುಂಬೈಗೆ ತೆರಳದಂತೆ ಸೂಚಿಸಬೇಕೆಂದು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರನ್ನು ತಡೆಯಬೇಕೆಂದು ಮನವಿ ಮಾಡಿದ್ದಾರೆ.
16 ಶಾಸಕರು ರಾಜೀನಾಮೆ ನೀಡಿದ ಮೇಲೆ ಈಗ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕರು ಮನವೊಲಿಸುವ ನಾಟಕ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಈಗ ಕಾಲು ಹಿಡಿಯಲು ಸಿದ್ಧರಾಗಿದ್ದಾರೆ. ಆದರೆ ರಾಜೀನಾಮೆ ನೀಡಿ ಪ್ರತಿಪಕ್ಷದಲ್ಲಿ ಕುಳಿತಿಕೊಂಡು ಕೆಲಸ ಮಾಡುವುದು ಒಳಿತು ಎಂದು ಬಹುತೇಕ ಶಾಸಕರು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.