ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ಎಸ್ಐಟಿ ತೀವ್ರವಾಗಿ ತನಿಖೆ ನಡೆಸುತ್ತಿದ್ದು, ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದವರಿಂದ ವಸೂಲಿ ಮಾಡಿ ಹೂಡಿಕೆದಾರರಿಗೆ ನೀಡಬೇಕು ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ತಿಳಿಸಿದರು.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ ನಾಗೇಂದ್ರ ಆರೋಗ್ಯವಾಗಿದ್ದು, ನಾಳೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಗುರುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ವೇಳೆ ವಿಧಾನ ಸಭೆಗೆ ಹಾಜರಾಗಲಿದ್ದಾರೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಆಸ್ಟರ್ ಹಾಸ್ಪಿಟಲ್ಗೆ ಭೇಟಿ ನಾಗೇಂದ್ರ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಸದನದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ವಿಶ್ವಾಸಮತ ಸಾಬೀತುಪಡಿಸಲಿದ್ದಾರೆ ಎಂದರು.
ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಮನ್ಸೂರ್ ಖಾನ್ ಗೆ ಆಸ್ತಿ ಮಾರಾಟ ಮಾಡಿದ್ದೇನೆ ಅಷ್ಟೇ, ಆದರೆ ರೋಷನ್ ಬೇಗ್ ಅವರ ಮೇಲೆ ಬೇರೆ ಬೇರೆ ಆರೋಪಗಳಿವೆ. ಜಾರಿ ನಿರ್ದೇಶನಾಲಯ ಕೂಡ ತಮಗೆ ನೋಟಿಸ್ ನೀಡಿತ್ತು. ವಿಚಾರಣೆಗೆ ನಾನು ಹಾಜರಾಗಿದ್ದು, ಇಡಿ ಅಧಿಕಾರಿಗಳು ತಮಗೆ ಆರೋಪ ಮುಕ್ತಗೊಳಿಸಿದ್ದಾರೆ ಎಂದರು.
ರೋಷನ್ ಬೇಗ್ಗೆ 400 ಕೋಟಿ ರೂ ಹಣ ನೀಡಿದ್ದೇನೆಂದು ಮನ್ಸೂರ್ ಅಹಮದ್ ವಿಡಿಯೋದಲ್ಲಿ ಹೇಳಿದ್ದಾನೆ. ಈ ಸಂಬಂಧ ವಿಚಾರಣೆಗೆ ಹಾಜರಾಗಬೇಕೆಂದು ಎಸ್ಐಟಿ ತಮಗೆ ನೋಟೀಸ್ ನೀಡುವ ಸಾಧ್ಯತೆ. ಮನ್ಸೂರ್ ಖಾನ್ ಜೊತೆ ವ್ಯವಹಾರ ಮಾಡಿರುವ ಕಾರಣ ನೊಟೀಸ್ ನೀಡಿದರೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಅವರು ತಿಳಿಸಿದರು.
ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಲ್ಲಿ ರೋಷನ್ ಬೇಗ್ ಹಿರಿಯ ನಾಯಕರು. ಬಿಜೆಪಿ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದು, ಅವರು ಯಾವುದೋ ಆಮಿಷಕ್ಕೆ ಒಳಗಾಗಿರಬಹುದು, ಇಲ್ಲವೋ ತಮಗೆ ಗೊತ್ತಿಲ್ಲ. ನಿನ್ನೆ ತಡರಾತ್ರಿ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್, ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಅವರು ರೋಷನ್ ಬೇಗ್ ಜೊತೆ ಇದ್ದರು ಎಂಬುದು ತಮಗೂ ಆಶ್ಚರ್ಯ ಮೂಡಿಸಿದೆ ಎಂದು ಅವರು ಹೇಳಿದರು.