ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಶ್ರೀಮಂತ್ ಪಾಟೀಲ್
ಬೆಂಗಳೂರು: ಅತೃಪ್ತ ಶಾಸಕರ ರಾಜಿನಾಮೆ ಪ್ರಹಸನ ಮತ್ತು ರಾಜಕೀಯ ಮುಖಂಡರ ರೆಸಾರ್ಟ್ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ರಾತ್ರೋ ರಾತ್ರಿ ನಾಪತ್ತೆಯಾಗುವ ಮೂಲಕ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡಿದ್ದ ಶಾಸಕ ಶ್ರೀಮಂತ್ ಪಾಟೀಲ್ ಇದೀಗ ಮುಂಬೈ ನ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ.
ನಿನ್ನೆ ಕಾಂಗ್ರೆಸ್ ಶಾಸಕರೊಂದಿಗೆ ಬೆಂಗಳೂರಿನ ಪ್ರಕೃತಿ ರೆಸಾರ್ಟ್ ನಲ್ಲಿ ತಂಗಿದ್ದ ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ರಾತ್ರೋರಾತ್ರಿ ರೆಸಾರ್ಟ್ನಿಂದ ನಾಪತ್ತೆಯಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಶ್ರೀಮಂತ ಪಾಟೀಲ್ ಹಾಗೂ ಅವರ ಪಿಎಗಳ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ.
ಆದರೆ ಇದೀಗ ಶ್ರೀಮಂತ್ ಪಾಟೀಲ್ ಪತ್ತೆಯಾಗಿದ್ದು, ಅದೂ ಕೂಡ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ. ಹೌದು.. ನಿನ್ನೆ ಬೆಂಗಳೂರಿನ ಪ್ರಕೃತಿ ರೆಸಾರ್ಟ್ ನಲ್ಲಿ ನಾಪತ್ತೆಯಾಗಿದ್ದ ಶಾಸಕರು ಬೆಳಗ್ಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಶ್ರೀಮಂತ್ ಪಾಟೀಲ್ ಅವರಿಗೆ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಇದೇ ಕಾರಣಕ್ಕೆ ಅವರು ಮುಂಬೈನ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಆದರೆ ಬೆಂಗಳೂರಿನಲ್ಲಿ ಎದೆನೋವು ಕಾಣಿಸಿಕೊಂಡರೆ ಮುಂಬೈಗೆ ತೆರಳಿ ಚಿಕಿಕ್ಸೆ ಪಡೆಯುವ ಅಗತ್ಯವೇನಿತ್ತು, ಬೆಂಗಳೂರಿನಲ್ಲಿ ಎದೆನೋವಿಗೆ ಸೂಕ್ತ ಚಿಕಿತ್ಸೆ ನೀಡಬಲ್ಲ ಆಸ್ಪತ್ರೆಗಳಿರಲಿಲ್ಲವೇ ಎಂಬ ಪ್ರಶ್ನೆ ಕೂಡ ಇದೀಗ ಉದ್ಘವವಾಗಿದೆ. ಅಂತೆಯೇ ಎದೆ ನೋವು ನೆಪದಲ್ಲಿ ಮುಂಬೈನಲ್ಲಿರುವ ಅತೃಪ್ತರ ಗ್ಯಾಂಗ್ ಸೇರಿಕೊಳ್ಳಲು ಶ್ರೀಮಂತ್ ಪಾಟೀಲ್ ಈ ಪ್ರಹಸನ ನಡೆಸಿದರೇ ಎಂಬ ಪ್ರಶ್ನೆ ಕೂಡ ರಾಜಕೀಯ ವಲಯದಲ್ಲಿ ಉದ್ಭವವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos