ಬೆಂಗಳೂರು: ಒಬ್ಬೊಬ್ಬ ಶಾಸಕರಿಗೆ ಮಾತನಾಡಲು ಕಾಲಾವಕಾಶ ನೀಡುವ ಮೂಲಕ ಸದನದಲ್ಲಿ ಕಾಲಹರಣ ಮಾಡಲಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ವಿಧಾನಸಭೆಯ ಕಲಾಪವನ್ನು ಸ್ಪೀಕರ್ ಅವರು ಸೋಮವಾರಕ್ಕೆ ಮುಂದೂಡಿದ ಬಳಿಕ ಬಿಜೆಪಿ ಶಾಸಕರೊಂದಿಗೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಬಹುಮತ ಇಲ್ಲದಿದ್ದರೂ ಕಾಲಹರಣ ಮಾಡಲಾಗಿದೆ. ಆದಷ್ಟು ಬೇಗ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುವಂತೆ ಸ್ಪೀಕರ್ಗೂ ಪತ್ರ ಬರೆದಿದ್ದೇವೆ, ರಾಜ್ಯಪಾಲರಿಗೂ ಪತ್ರ ಬರೆದು ತಿಳಿಸಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ರಾಜ್ಯಪಾಲರು ಏನು ಮಾಡಬಹುದು ಅದನ್ನು ಮಾಡಿದ್ದಾರೆ. ಹೀಗಾಗಿ ಅವರು ಕೇಂದ್ರಕ್ಕೆ ವರದಿ ಕಳುಹಿಸಿದ್ದು, ಮುಂದಿನ ನಿರ್ಧಾರ ಅವರಿಗೆ ಬಿಟ್ಟಿದ್ದು. ಮತ್ತೆ ನಾವು ರಾಜ್ಯಪಾಲರ ಭೇಟಿ ಮಾಡುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.