ರಾಜಕೀಯ

ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸಿ: ರಾಜ್ಯಪಾಲರಿಂದ ಸಿಎಂ ಕುಮಾರಸ್ವಾಮಿಗೆ ಹೊಸ ಗಡುವು

Lingaraj Badiger
ಬೆಂಗಳೂರು: ರಾಜ್ಯಪಾಲ ವಜುಭಾಯಿ ವಾಲಾ ಅವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮತ್ತೊಂದು ಡೆಡ್ ಲೈನ್ ನೀಡಿದ್ದು, ಶುಕ್ರವಾರ ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚಿಸಿದ್ದಾರೆ.
ನಿನ್ನೆ ವಿಧಾನಸಭೆಯಲ್ಲಿ ನಡೆದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡಿದ್ದು, ಇಂದು ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚಿಸಿದ್ದರು. ಆದರೆ ರಾಜ್ಯಪಾಲರು ನೀಡಿದ ಗಡುವು ಮೀರಿದರೂ ವಿಶ್ವಾಸಮತ ಸಾಬೀತಪಡಿಸದ ಸಿಎಂ ಕುಮಾರಸ್ವಾಮಿ ಅವರಿಗೆ ಇಂದು ರಾಜ್ಯಪಾಲರು ಮರುಜ್ಞಾಪನ ಪತ್ರ ರವಾನಿಸಿದ್ದು, ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚನೆ ನೀಡಿದ್ದಾರೆ.
ಈ ಮಧ್ಯೆ ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಪುನಾರಂಭವಾಗಿದ್ದು, ಚರ್ಚೆ ಮುಂದುವರೆದಿದೆ.
ಇಡೀ ದೇಶದ ಕುತೂಹಲ ಕೆರಳಿಸಿರುವ ಕರ್ನಾಟಕ ರಾಜಕೀಯ ವಿಚಾರ ಇದೀಗ ನಿರ್ಣಾಯಕ ಘಟ್ಟ ತಲುಪಿದ್ದು, ಇಂದು ಸಂಜೆ 6 ಗಂಟೆಯೊಳಗಾದರೂ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸುತ್ತಾರೆ ಎಂಬುದು ಕಾದು ನೋಡಬೇಕು.
SCROLL FOR NEXT