ಬೆಂಗಳೂರು: ದಿಢೀರನೆ ರಾಜಿನಾಮೆ ನೀಡಿ ಮುಂಬೈಗೆ ಹಾರಿದ್ದ ಅತೃಪ್ತ ಶಾಸಕರ ಬಣಕ್ಕೆ ಸ್ಪೀಕರ್ ರಮೇಶ್ ಕುಮಾರ್ ಶಾಕ್ ನೀಡಿದ್ದು, ಓರ್ವ ಪಕ್ಷೇತರ ಶಾಸಕ, ಇಬ್ಬರು ಕಾಂಗ್ರೆಸ್ ಶಾಸಕರ ಅನರ್ಹಗೊಳಿಸಿದ್ದಾರೆ. ಅಂತೆಯೇ ಉಳಿದ ಅತೃಪ್ತ ಶಾಸಕರ ಕುರಿತ ನಿರ್ಣಯವನ್ನು ಶೀಘ್ರ ಕೈಗೊಳ್ಳುತ್ತೇನೆ ಎಂದು ಹೇಳುವ ಮೂಲಕ ಅತೃಪ್ತರ ಆತಂಕಕ್ಕೆ ಕಾರಣವಾಗಿದ್ದಾರೆ.
ಅತೃಪ್ತ ಶಾಸಕರ ಗುಂಪಿನಲ್ಲಿದ್ದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಪಕ್ಷೇತರರಾಗಿ ಗುರುತಿಸಿಕೊಂಡಿದ್ದ ಕೆಪಿಜೆಪಿಯ ಆರ್.ಶಂಕರ್ ಅವರನ್ನು ಅನರ್ಹ ಮಾಡಿ ಇಂದು ಸ್ಪೀಕರ್ ಆದೇಶ ಹೊರಡಿಸಿದ್ದಾರೆ. ಈ ಕುರಿತಂತೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಸ್ಪೀಕರ್ ರಮೇಶ್ ಕುಮಾರ್ ಅವರು, ಕಳೆದ ಕೆಲವು ವಾರಗಳಿಂದ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ನಾನು ಯಾರ ಮುಲಾಜಿಗೂ ಒಳಗಾಗಿ ಈ ನಿರ್ಣಯ ಕೈಗೊಂಡಿಲ್ಲ. ಸಂವಿಧಾನದ ಪ್ರಕಾರ ಏನು ಮಾಡಬಹುದಿತ್ತೋ ಅದನ್ನೇ ಮಾಡಿದ್ದೇನೆ. ಜನರಿಂದ ಬಂದವನು ನಾನು ಜನರಿಗಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ ಎಂದು ಹೇಳಿದರು.
ನನಗೆ ಸರಿ ಎಂಬುದನ್ನೇ ಮಾಡಿದ್ದಾನೆ. ಯಾರೂ ಕೂಡ ನನ್ನ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ಬಿಜೆಪಿ ಏನು ಚಿಂತನೆ ಮಾಡುತ್ತದೆ, ಕಾಂಗ್ರೆಸ್ ಏನು ತಿಳಿಯುತ್ತದೆ.. ಅದೆಲ್ಲಾ ನನಗೆ ಬೇಕಿಲ್ಲ. ಆದರೆ ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಅಂತೆಯೇ ಇನ್ನು ಕೆಲ ದಿನಗಳಲ್ಲೇ ಬಾಕಿ ಉಳಿದಿರುವ ಅತೃಪ್ತ ಶಾಸಕರ ಕುರಿತ ನಿರ್ಣಯವನ್ನೂ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಆ ಮೂಲಕ ಪ್ರಸ್ತುತ ಮುಂಬೈನಲ್ಲಿ ಉಳಿದುಕೊಂಡಿರುವ ಅತೃಪ್ತ ಶಾಸಕರಿಗೆ ಛಾಟಿ ಏಟು ನೀಡುವ ಕುರಿತು ಸ್ಪೀಕರ್ ರಮೇಶ್ ಕುಮಾರ್ ಮುನ್ಸೂಚನೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos