ಪ್ರಜ್ವಲ್ ರೇವಣ್ಣ, ತೇಜಸ್ವಿ ಸೂರ್ಯ
ನವದೆಹಲಿ: ಕರ್ನಾಟಕದ ಯುವ ಸಂಸದರಿಬ್ಬರು ಲೋಕಸಭೆಯಲ್ಲಿ ತಮ್ಮ ಮಾತುಗಳ ಮೂಲಕ ಸುದ್ದಿಯಾಗಿ ಭರವಸೆಯ ಯುವ ನಾಯಕರು ಎನಿಸಿಕೊಂಡಿದ್ದಾರೆ. ಅವರೇ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ತೇಜಸ್ವಿ ಸೂರ್ಯ.
ರಾಜ್ಯದಲ್ಲಿ ಅತಿ ಭ್ರಷ್ಟ ಸರ್ಕಾರ ಆಡಳಿತದಲ್ಲಿದೆ ಎಂದು ಕಾಂಗ್ರೆಸ್-ಜೆಡಿಎಸ್ ನ ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದ್ದಾರೆ.
ನಿನ್ನೆ ಅಧಿವೇಶನದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ದೇಶ ಪ್ರಗತಿಯತ್ತ ಮುನ್ನುಗುತ್ತಿದ್ದರೆ, ಕರ್ನಾಟಕ ಮಾತ್ರ ಹಿಂದುಳಿಯುತ್ತಿದೆ. ನನ್ನ ರಾಜ್ಯ ಅಭಿವೃದ್ಧಿ ಕಾಣಬೇಕು ಎಂಬುದು ನನ್ನ ಇಚ್ಛೆ. ರಾಜ್ಯದಲ್ಲಿ ಕೋಟ್ಯಂತರ ರೂಪಾಯಿ ಐಎಂಎಫ್ ಹಗರಣ ನಡೆದಿದೆ. 10 ಸಾವಿರ ಎಫ್ಐಆರ್ ದಾಖಲಾದರೂ ಮೈತ್ರಿ ಸರ್ಕಾರದ ನಾಯಕರ ಬೆಂಬಲದಿಂದ ಏನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಹೊಸ ಸರ್ಕಾರ ಬರಲಿದೆ. ಹೊಸ ಕರ್ನಾಟಕದ ಉದಯ ನಮ್ಮ ಯುವ ಜನರ ಕೈಯಲಿದೆ. ನಮ್ಮ ಆಶಯ ಅನುಭವ, ಚಿಂತನೆಗಳನ್ನು ಕೊಡುವತ್ತ ನಾವು ನೋಡಬೇಕಿದೆ ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಸೂಚನೆ ನೀಡಿದರು.
ಇನ್ನು ತೇಜಸ್ವಿ ಸೂರ್ಯ ಮಾತಿಗೆ ಸದನದಲ್ಲಿಯೇ ತಿರುಗೇಟು ನೀಡಿದ ನೂತನ ಸಂಸದ ಪ್ರಜ್ವಲ್ ರೇವಣ್ಣ ಸದನವನ್ನು ದಾರಿ ತಪ್ಪಿಸಬೇಡಿ. ಐಎಂಎಫ್ ಹಗರಣದಲ್ಲಿ ಕಾಂಗ್ರೆಸ್ ಸಚಿವ ರೋಷನ್ ಬೇಗ್ ಹೆಸರು ಕೇಳಿ ಬಂದಿದ್ದು, ಅವರನ್ನು ಪಕ್ಷ ಅಮಾನತು ಮಾಡಿದೆ. ಐಎಂಎಫ್ ಕುರಿತು ಸರ್ಕಾರ ತನಿಖೆಗೆ ಕೂಡ ಆಗ್ರಹಿಸಿದೆ ಎಂದರು.
2009ರಿಂದ 2013ರವರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕಾಯುಕ್ತ ಸಂತೋಷ್ ಹೆಗ್ಡೆ ವರದಿಯಲ್ಲಿ ಬಿಜೆಪಿ ನಾಯಕ ಯಡಿಯೂರಪ್ಪ ಅವರನ್ನು ಆರೋಪಿಯೆಂದು ಉಲ್ಲೇಖಿಸಿರುವ ಬಗ್ಗೆ ನೆನಪಿಸಿದರು.
ಮಂಡ್ಯ ಭಾಗದ ರೈತರಿಗೆ ಎರಡು ಟಿಎಂಸಿ ನೀರು ಕೊಡಿ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದುವರೆಗೂ ಕರ್ನಾಟಕದಲ್ಲಿ ಸಾವಿರದ 600 ರೈತರು ಮೃತಪಟ್ಟಿದ್ದಾರೆ. ತಮಿಳುನಾಡು ಕೂಡ ನೀರು ಕೇಳುತ್ತಿದೆ. ಮಂಡ್ಯದ ಜನರಿಗೆ ಮಾನವೀಯತೆ ದೃಷ್ಟಿಯಿಂದ ನೀರು ಬಿಡಿ. ಕೇಂದ್ರ ಸಚಿವ ಸದಾನಂದಗೌಡ ಅವರ ಮೂಲಕ ಒತ್ತಾಯಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos