ಸಿಎಂ ಕುಮಾರಸ್ವಾಮಿ ಅವರು ಬೀದರ್ ನಲ್ಲಿ ಜನತಾ ದರ್ಶನ ನಡೆಸಿ ವಿಕಲಚೇತನರಿಗೆ ಸ್ಥಳದಲ್ಲೇ ಪರಿಹಾರ ವಿತರಿಸಿದರು.
ಬೀದರ್: ಗ್ರಾಮ ವಾಸ್ತವ್ಯ ಕುರಿತು ಬಿಜೆಪಿ ನಾಯಕರು ನಡೆಸುತ್ತಿರುವ ಟೀಕಾ ಪ್ರಹಾರಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕುವೆಂಪು ರಚಿತ "ಅರ್ಥವಿಲ್ಲದ ಟೀಕೆಗೆ ಮೌನವಾಗಿರುವುದೆ ಉತ್ತಮ" ಎಂಬ ನುಡಿಯ ಹೇಳುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮುಗಿಸಿ ಇಂದು ಬೆಳಿಗ್ಗೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ ಕ್ಷೇತ್ರಗಳಲ್ಲಿ ಮಾತ್ರ ಗ್ರಾಮ ವಾಸ್ತವ್ಯ ಮಾಡುತ್ತಾರೆ ಎಂದು ಹೇಳುತ್ತಾರೆ. ನನ್ನ ವೈಯಕ್ತಿಕ ಪ್ರವಾಸದ ಬಗ್ಗೆ ಟೀಕೆಗಳಿಗೆ ಮೌನವಾಗಿರುವುದೇ ಉತ್ತಮ ಎಂಬ ಮಾತು ನನಗೆ ಯಾದಗಿರಿ ಜಿಲ್ಲೆಯ ಗುರಮಿಟಕಲ್ ತಾಲೂಕಿನ ಚಂಡರಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದಾಗ ಶಾಲೆಯ ಗೋಡೆ ಮೇಲೆ ರಾಷ್ಟ್ರಕವಿ ಕುವೆಂಪು ಅವರ ನುಡಿ ಬರೆದಿರುವುದು ನೆನಪಿಗೆ ಬರುತ್ತಿದೆ ಎಂದು ಪ್ರಸ್ತಾಪಿಸಿ ಟಾಂಗ್ ನೀಡಿದರು.
ಅಮೆರಿಕ ಪ್ರವಾಸ ಸರ್ಕಾರಿ ಕಾರ್ಯಕ್ರಮವಲ್ಲ, ಸ್ವಂತ ಖರ್ಚಿನಲ್ಲಿ ಹೊಗುತ್ತಿದ್ದೇನೆ, ಸಮಾಜದ ಗುರುಗಳು ದೇವಸ್ಥಾನದ ಭೂಮಿ ಪೂಜೆಯನ್ನು ತಾವೇ ಮಾಡಬೇಕು ಎಂದು ಹೆಚ್ಚು ಒತ್ತಡ ಹೇರಿರುವುದರಿಂದ ಹೋಗುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಒಂದೇ ರಾತ್ರಿ ಎಲ್ಲಾ ಬದಲಾವಣೆ ತರಲು ಸಾಧ್ಯವಿಲ್ಲ, ಗ್ರಾಮ ವಾಸ್ತವ್ಯದ ಜತೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ರಮಗಳಿಂದ ಬದಲಾವಣೆ ತರಲು ಸಾಧ್ಯ ಎಂದು ಸಿಎಂ ಹೇಳಿದರು
ಗ್ರಾಮ ವಾಸ್ತವ್ಯಕ್ಕೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಗಣಿ ಭೂವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್, ಕ್ರೀಡಾ ಸಚಿವ ರಹಿಂಖಾನ್, ಶಾಸಕ ಬಿ ನಾರಾಯಣರಾವ್ ಸಾಥ್ ನೀಡಿದರು
ಇಂದು ಬೆಳಿಗ್ಗೆ ಉಜಳಂಬ ಗ್ರಾಮ ವಾಸ್ತವ್ಯ ಮುಗಿಸಿದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇರವಾಗಿ ಬೀದರ್ ವಿಮಾನ ತರಬೇತಿ ಕೇಂದ್ರದ ಮೂಲಕ ವಿಶೇಷ ವಿಮಾನದಿಂದ ಬೆಂಗಳೂರು ಪ್ರವಾಸ ಕೈಗೊಂಡರು.
ಯಶಸ್ವಿಯಾದ ಗ್ರಾಮ ವಾಸ್ತವ್ಯ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಉಜಳಂಬ ಗ್ರಾಮದಲ್ಲಿ ನಡೆಸಿದ ವಾಸ್ತವ್ಯ ಯಶಸ್ವಿಯಾಗಿದ್ದು, ಬಸವಕಲ್ಯಾಣ ಭಾಗದ ಗ್ರಾಮಗಳಲ್ಲಿ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸುಮಾರು 4000 ಅಧಿಕ ಜನರ ದೂರುಗಳು ಜನತಾ ದರ್ಶನದಲ್ಲಿ ಸಿಎಂ ಎದುರು ಬಂದಿದ್ದು ದಶಕಗಳಿಂದ ದಿಕ್ಕು ಕಾಣದ ಊರಲ್ಲಿ ಸರ್ಕಾರದ ವಾಸ್ತವ್ಯದಿಂದ ಹಣೆ ಬರಹವೆ ಬದಲಾಗಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬಂದಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos