ನಾಗಮಂಗಲ: ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಮಂಡ್ಯದಿಂದ ಸ್ಪರ್ಧಿಸಲು ಜೆಡಿಎಸ್ ಪಕ್ಷದಿಂದಲೇ ಟಿಕೆಟ್ ನೀಡಬಹುದು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು,ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದೇವೆ.ಪಕ್ಷದ ಕಾರ್ಯಕರ್ತರು ಸುಮಲತಾ ಅಂಬರೀಶ್ ಗೆ ಟಿಕೆಟ್ ಕೊಡಿಸುವಂತೆ ಒತ್ತಾಯ ಮಾಡಿದ್ದಾರೆ. ತಮ್ಮೆಲ್ಲಾ ಪ್ರಯತ್ನದ ನಡುವೆಯೂ ಅಂತಿಮವಾಗಿ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.
ಫೆ.28 ರಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಸುಮಲತಾ ಅಂಬರೀಷ್ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಅವರೇ ಚುನಾವಣೆಗೆ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ತಮ್ಮ ಮೇಲಿನ ನಂಬಿಕೆಯಿಂದ ಬೆಂಬಲಿಗರು ಭರವಸೆಯ ಮಾತುಗಳನ್ನಾಡಿರಬಹುದು.ಆ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
ಅಂಬರೀಶ್ ಅವರು ಜಿಲ್ಲೆಗೆ ಕೆಲಸ ಮಾಡಿಲ್ಲ ಎಂಬಂತೆ ಕುಮಾರಸ್ವಾಮಿ ಮಾತನಾಡಿದ್ದು ತಮಗೆ ಆಶ್ಚರ್ಯ ತಂದಿದೆ. ಕಳೆದ ಚುನಾವಣೆಯಲ್ಲಿ ಅಂಬರೀಶ್ ಜೆಡಿಎಸ್ಗೆ ಪರೋಕ್ಷವಾಗಿ ಬೆಂಬಲ ನೀಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ ಎಂದು ಬಯಸಿದ್ದರು. ಅಂದು ಕುಮಾರಸ್ವಾಮಿಗೆ ಹಾಗೂ ಜೆಡಿಎಸ್ ಪಕ್ಷಕ್ಕೆ ಅಂಬರೀಶ್ ಬೆಂಬಲ ಬೇಕಿತ್ತು ,ಈಗ ಬೇಡವಾಗಿದ್ದಾರೆ ಎಂದು ಅಸಮಾಧಾನ ವ್ಯೆಕ್ತಪಡಿಸಿದರು.
ಅಂಬರೀಶ್ ಅವರ ಮೇಲೆ ಕುಮಾರಸ್ವಾಮಿಗೆ ಗೌರವ ಇದ್ದರೆ ಸುಮಲತಾ ಅವರಿಗೆ ಜೆಡಿಎಸ್ ಟಿಕೆಟ್ ನೀಡಬೇಕು. ಹಾಗೊಂದು ವೇಳೆ ನೀಡಿದರೂ ಆಶ್ಚರ್ಯವಿಲ್ಲ ಎಂದು ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.