ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿರುವ ಉಮೇಶ್ ಜಾಧವ್ ಮತ್ತು ಮೂವರು ಬಂಡಾಯ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮ್ಟಳ್ಳಿ ಮತ್ತು ಬಿ ನಾಗೇಂದ್ರ ಅವರಿಗೆ ಸ್ಪೀಕರ್ ಕೆ ಆರ್ ರಮೇಶ್ ನೊಟೀಸ್ ಜಾರಿ ಮಾರ್ಚ್ 12ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನೊಟೀಸ್ ಜಾರಿ ಮಾಡಿದ್ದಾರೆ. ಚಿಂಚೋಳಿ ಕ್ಷೇತ್ರದ ಶಾಸಕರಾಗಿದ್ದ ಉಮೇಶ್ ಜಾಧವ್ ನಾಲ್ಕು ದಿನಗಳ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅವರ ರಾಜೀನಾಮೆಯನ್ನು ಸ್ಪೀಕರ್ ಇನ್ನೂ ಸ್ವೀಕರಿಸಿಲ್ಲ.
ತಮ್ಮ ರಾಜೀನಾಮೆ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಉಮೇಶ್ ಜಾಧವ್, ತಮಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸ್ವಾತಂತ್ರ್ಯವಿದೆ. ನಾವು ಜೀತದಾಳುಗಳಲ್ಲ. ತಮ್ಮನ್ನು ಅನರ್ಹತೆಗೊಳಿಸುವುದು, ಬಿಡುವುದು ಸ್ಪೀಕರ್ ಗೆ ಬಿಟ್ಟ ತೀರ್ಮಾನ. ತಮಗೆ ಈ ಬಗ್ಗೆ ಯಾವುದೇ ಆತಂಕವಿಲ್ಲ ಎಂದರು.
ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಉಮೇಶ್ ಜಾಧವ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಯಾವುದೇ ಕಾನೂನು ತೊಂದರೆಗಳಾಗುವುದಿಲ್ಲ ಎಂದಿದ್ದಾರೆ ಎಂದರು.
ಆಪರೇಷನ್ ಕಮಲದಿಂದ 25ರಿಂದ 30 ಕೋಟಿ ರೂಪಾಯಿಗಳವರೆಗೆ ಉಮೇಶ್ ಜಾಧವ್ ಪಡೆದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಮಾಡಿರುವ ಆರೋಪದಿಂದ ತಮ್ಮ ಕ್ಷೇತ್ರದಲ್ಲಿ ತೊಂದರೆಯಾಗಿದೆ. ನನಗೆ ಯಾಕೆ ಹಣ ಬೇಕು, ಸರ್ಕಾರಿ ವೈದ್ಯನಾಗಿ ನಿವೃತ್ತಿ ಹೊಂದಿದ ನಂತರ ನನಗೆ ಪಿಂಚಣಿ ಹಣವಾಗಿ ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಬರುತ್ತದೆ. ಈ ಆರೋಪಗಳೆಲ್ಲ ನನ್ನ ತೇಜೋವಧೆ ಮಾಡುವ ಯತ್ನವಷ್ಟೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos