ಆರ್. ಅಶೋಕ ಮತ್ತು ಕಟ್ಟ ಸುಬ್ರಮಣ್ಯನಾಯ್ಡು
ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಅಸಮಾಧಾನ, ಆಕ್ರೋಶ ಸ್ಫೋಟಗೊಂಡಿದ್ದು ಪಕ್ಷದ ಉಸ್ತುವಾರಿ ಮುರುಳೀಧರ ರಾವ್ ಅವರ ಮುಂದೆಯೇ ಆರ್.ಅಶೋಕ್ ಮತ್ತು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಡುವೆ ಮಾತಿನ ಚಕಮಕಿ, ವಾಗ್ದಾಳಿ ನಡೆದಿದೆ ಎಂದು ಹೇಳಲಾಗಿದೆ.
ನಿನ್ನೆ ಮಲ್ಲೇಶ್ವರಂ ನ ಪಕ್ಷದ ಕಚೇರಿಯಲ್ಲಿ ಇಬ್ಬರು ನಾಯಕರ ನಡುವೆ ಏರು ಧ್ವನಿಯಲ್ಲಿ ಬಿರುಸಿನ ಮಾತುಕತೆ, ವಾಗ್ವಾದ ನಡೆದಿದೆ ಎಂದು ಗೊತ್ತಾಗಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ರಾಜಕೀಯ ವಿಚಾರವಾಗಿ ಇಬ್ಬರು ನಾಯಕರ ನಡುವೆ ಗಲಾಟೆ, ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಪುನಃ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿರುವ ಬಗ್ಗೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೆಂಡಾಮಂಡಲರಾಗಿದ್ದಾರೆ ಎಂದು ಹೇಳಲಾಗಿದೆ.
ಶಿವಾಜಿನಗರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಚಾರ ಕಾರ್ಯಕ್ಕೆ ಬಂದಾಗ ಅವರಿಗೆ ಚಪ್ಪಲಿ ತೋರಿಸಿದ ಕಾಂಗ್ರೆಸ್ ಮುಖಂಡರನ್ನು ಆರ್.ಅಶೋಕ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ, ಇದು ಸರಿಯಲ್ಲ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಏರು ದನಿಯಲ್ಲಿ ಅಶೋಕ್ ವಿರುದ್ಧ ಹರಿಹಾಯ್ದು ಸಭೆಯ ಅರ್ಧದಲ್ಲೇ ಕೋಪಮಾಡಿಕೊಂಡು ಎದ್ದು ಹೊರಟು ಹೋಗಿದ್ದಾರೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos