ಹೆಂಗಸರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರಿಂದ ಶಿಖಂಡಿ ರಾಜಕೀಯ: ಸುರೇಶ್ ಗೌಡ
ಮಂಡ್ಯ: ಹೆಂಗಸರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಶಿಖಂಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ನಾಗಮಂಗಲದ ಜೆಡಿಎಸ್ ಶಾಸಕ ಸುರೇಶ್ ಗೌಡ ವಾಗ್ದಾಳಿ ಮಾಡಿದ್ದಾರೆ.
ಮಂಡ್ಯದ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓರ್ವ ಹೆಂಗಸನ್ನು ಮುಂದಿಟ್ಟುಕೊಂಡು ಹಿಂದಿನಿಂದ ರಾಜಕಾರಣ ಮಾಡುವ ಮೂಲಕ ಮೈತ್ರಿ ಅಭ್ಯರ್ಥಿ ವಿರುದ್ದ ಚೆಲುವರಾಯಸ್ವಾಮಿ ಕೆಲಸ ಮಾಡಿದ್ದಾರೆ. ಇದೊಂದು ರೀತಿಯ ಶಿಖಂಡಿ ರಾಜಕೀಯ ಎಂದು ನೇರವಾಗಿಯೇ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಮೂಲ ಕಾಂಗ್ರೆಸಿಗರು ಮಾತ್ರ ಮೈತ್ರಿ ಧರ್ಮ ಪಾಲಿಸಿದ್ದಾರೆ. ಇತ್ತೀಚಗೆ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗಿರುವ ಬಹುತೇಕ ಜನರು ಮೈತ್ರಿ ಧರ್ಮ ಪಾಲನೆ ಮಾಡಿಲ್ಲ. ಅವರೆಲ್ಲರೂ ಮೈತ್ರಿ ಅಭ್ಯರ್ಥಿ ವಿರುದ್ದವಾಗಿ ಕೆಲಸ ಮಾಡಿದ್ದಾರೆ.ಮೂಲ ಕಾಂಗ್ರೆಸಿಗರಾದ ಆತ್ಮಾನಂದ, ಜಿಲ್ಲಾಧ್ಯಕ್ಷ ಗಂಗಾಧರ್ ಸೇರಿದಂತೆ ಹಲವರು ಶಕ್ತಿ ಮೀರಿ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ.
ಇತ್ತೀಚೆಗೆ ಹೋದವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ತಿಳಿಯದ ಕೆಲ ಬ್ಲಾಕ್ ಮೇಲ್ ರಾಜಕಾರಣಿಗಳು ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಿಲ್ಲ ಎಂದು ಚೆಲುವರಾಯಸ್ವಾಮಿ ಹೆಸರು ಹೇಳದೆ ಟೀಕಾಪ್ರಹಾರ ನಡೆಸಿದರು.
ಚುನಾವಣೆ ವೇಳೆ ತಟಸ್ಥರಾಗಿ ಉಳಿದಿದ್ದೇವೆ ಎಂದು ಹೇಳುತ್ತಲೇ ಅವರು ಪಕ್ಷೇತರ ಅಭ್ಯರ್ಥಿ ಪರ ಬಹಿರಂಗವಾಗಿಯೇ ನಾಗಮಂಗಲದಲ್ಲಿ ಪ್ರಚಾರ ಮಾಡಿದ್ದಾರೆ. ಬಿಜೆಪಿ ಬೆಂಬಲಿತ, ಪಕ್ಷೇತರ ಅಭ್ಯರ್ಥಿಗೆ ಇವರೆಲ್ಲರ ಸ್ಪಷ್ಟ ಬೆಂಬಲವಿದೆ. ಒಂದಂತೂ ಸತ್ಯ, ಇವೆಲ್ಲರದರ ಹಿಂದೆ ಯಾರದೋ ಪ್ರಬಲ ಕೈವಾಡವಿದೆ. ಅವರು ಮಹಾನ್ ರಾಜಕೀಯ ವ್ಯಕ್ತಿಗಳು ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಹ ಗುರಿಯಾಗಿಸಿ ಸುರೇಶ್ ಗೌಡ ಕಟುವಾಗಿ ಟೀಕಿಸಿದ್ದಾರೆ.
ಹಲವರು ನಾಯಕರು ತಂತ್ರಗಾರಿಕೆ ಮಾಡಿ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲು ಹೊರಟಿದ್ದಾರೆ. ಇಂತಹ ಬೆದರಿಕೆ ರಾಜಕಾರಣಿಗಳನ್ನು ಪಕ್ಷಕ್ಕೆ ಕರೆತಂದು ಕಾಂಗ್ರೆಸ್ ಪಕ್ಷ ನಿರ್ನಾಮ ಮಾಡಿ, ಬಿಜೆಪಿ ಹುಟ್ಟಿಗೆ ಕಾರಣರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಚಲುವರಾಯಸ್ವಾಮಿ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಗೂಢಾಚಾರಿಕೆ ಮಾಡಿದ್ದಾರೆಂಬ ಆರೋಪಕ್ಕೆ ತಿರುಗೇಟು ನೀಡಿದ ಸುರೇಶ್ ಗೌಡ, ಇವನ್ಯಾವ ದೊಡ್ಡ ವ್ಯಕ್ತಿಯೆಂದು ಇವನ ಮೇಲೆ ಗೂಢಾಚಾರಿಕೆ ಮಾಡಲು ಹೋಗುತ್ತಾರೆ. ಇಲ್ಲ ಸಲ್ಲದ ಆರೋಪ ಮಾಡುವುದನ್ನು ಬಿಟ್ಟು ಬೇರೆ ಕೆಲಸ ನೋಡಿಕೊಳ್ಳಲ್ಲಿ. ಇಂತಹ ಪರಿಸ್ಥಿತಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ.ಅವರಿಗೆ ನಾವು ಅನಿವಾರ್ಯ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಯಾರು ಏನೇ ಮಾಡಿದರೂ ಈ ಬಾರಿ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ. ಒಂದೂವರೆ ಲಕ್ಷದ ಅಂತರದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಲಿದ್ದಾರೆ ಎಂದು ಸುರೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos