ಬೆಂಗಳೂರು: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ವೇಳೆ ಆದಾಯ ತೆರಿಗೆ ಇಲಾಖೆ ರಾಜ್ಯದ ಹಲವು ಭಾಗಗಳಲ್ಲಿ ದಾಳಿ ನಡೆಸಿತ್ತು.ಆದರೆ ಚುನಾವಣೆ ವೇಳೆ ನಡೆದ ದಾಳಿಯಿಂದಾಗಿ ಆದಾಯ ತೆರಿಗೆ ಇಲಾಖೆ ಕಾರ್ಯಕ್ಕೆ ಭಾರೀ ಪ್ರಮಾಣದಲ್ಲಿ ಟೀಕೆಗಳು ವ್ಯಕ್ತವಾದವು.
ಐಟಿ ದಾಳಿ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು, 2019ರಲ್ಲಿ ಅಂದರೆ ಲೋಕಸಭೆ ಚುನಾವಣೆ ವೇಳೆ 46 ಐಟಿ ದಾಳಿಗಳು ನಡೆದಿದ್ದವು, ಅದರಲ್ಲಿ 36 ದಾಳಿಗಳು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳ ಮನೆ ಮೇಲೆ ನಡೆದಿತ್ತು.
2018ರ ವಿಧಾನಸಭೆ ಚುನಾವಣೆ ವೇಳೆ 34 ದಾಳಿಗಳು ನಡೆದಿದ್ದವು, ಆಗಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರೇ ಟಾರ್ಗೆಟ್ ಆಗಿದ್ದರು. ಆದರೆ 2014ರ ಚುನಾವಣೆ ವೇಳೆ ಯಾವುದೇ ರೇಡ್ ಗಳು ನಡೆದಿರಲಿಲ್ಲ,
ಆಡಳಿತ ಪಕ್ಷ ಜನರ ಮನಸಲ್ಲಿ ಭಯ ಮೂಡಿಸುವ ತಂತ್ರ ಇದಾಗಿದೆ, ಐಟಿ, ಇಡಿ, ಮತ್ತು ಸಿಬಿಐ ಮುಂತಾದ ಏಜೆನ್ಸಿಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಕೇಂದ್ರ ಮಾಜಿ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ. 2018ರ ವಿಧಾನಸಭೆ ಚುನಾವಣೆ ವೇಳೆ ಹಾಗೂ ನಂತರದಲ್ಲಿ ಸಚಿವ ಡಿ,ಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯಾಗಿತ್ತು,
ಐಟಿ ದಾಳಿಯ ವಿಷಯವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜಕೀಯಗೊಳಿಸುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.