ಬಂಧನಕ್ಕೊಳಗಾದ ಬಿಜೆಪಿ ಪರ ಕಾರ್ಯಕರ್ತರು ಮತ್ತು ಪತ್ರಕರ್ತರು
ಬೆಂಗಳೂರು: ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಎಮೆರ್ಜೆನ್ಸಿ ಇನ್ ಕರ್ನಾಟಕ ಎಂಬ ಶಬ್ದ ಹ್ಯಾಶ್ ಟ್ಯಾಗ್ ನಿಂದ ಟ್ರೆಂಡಿಂಗ್ ಆಗಿತ್ತು.
ಏನಾಗಿದೆ, ಕರ್ನಾಟಕದಲ್ಲಿ ನಿಜವಾಗಿಯೂ ಏನಾದರೂ ರಾಜಕೀಯ ಬಿಕ್ಕಟ್ಟು ತಲೆದೋರಿದಿಯೇ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಗೊಂದಲಕ್ಕೀಡಾಗಿದ್ದರು. ಆದರೆ ಈ ಹ್ಯಾಶ್ ಟಾಗ್ ನೊಂದಿಗೆ ಟ್ವಿಟ್ಟರ್ ಅಭಿಯಾನ ಶುರುವಾಗಿದ್ದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿಷಯದಲ್ಲಿ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಯುರ್ವೇದ ಚಿಕಿತ್ಸೆ ಪಡೆಯಲು ಉಡುಪಿಗೆ ತೆರಳಿದ್ದ ಕುರಿತು "ಸುಳ್ಳು ಸುದ್ದಿ" ಪ್ರಕಟಿಸಿದ ಪತ್ರಕರ್ತ ಹಾಗೂ ಅದನ್ನು ಸಾಮಾಜಿಕ ತಾಣದಲ್ಲಿ ಟ್ರೋಲ್ ಮಾಡಿದ್ದ ವ್ಯಕ್ತಿಯನ್ನು ಬೆಂಗಳೂರು ಹೈಗ್ರೌಂಡ್ಸ್ ಪೋಲೀಸರು ಬಂಧಿಸಿದ್ದಾರೆ. ಈ ಬಂಧನ ವಿರೋಧಿಸಿ ಬಿಜೆಪಿಯವರು ಸೋಷಿಯಲ್ ಮೀಡಿಯಾಗಳಲ್ಲಿ ಅಭಿಯಾನ ಆರಂಭಿಸಿದ್ದರು.
ಪತ್ರಕರ್ತರ ಬಂಧನವಾದ ಕೆಲವೇ ಹೊತ್ತಿನಲ್ಲಿ ಬಿಜೆಪಿ ಆನ್ ಲೈನ್ ನಲ್ಲಿ ಈ ಅಭಿಯಾನ ಆರಂಭಿಸಿದ್ದು ಬಿಜೆಪಿ ಪರವಾಗಿರುವವರ ವಿರುದ್ಧ ಸಿಎಂ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಆಕ್ರಮಣ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ತುರ್ತು ಪರಿಸ್ಥಿತಿಯ ಸನ್ನಿವೇಶವನ್ನು ಸೃಷ್ಟಿಸಿದ್ದು ಸರ್ಕಾರದ ವಿರುದ್ಧ ತಮ್ಮ ಧ್ವನಿಯನ್ನು ಎತ್ತಿದವರನ್ನು ಗುರಿಯಾಗಿಟ್ಟುಕೊಂಡು ಕಿರುಕುಳ ನೀಡಲಾಗುತ್ತದೆ ಎಂದು ಬಿಜೆಪಿ ಆರೋಪಿಸಿದೆ.
ಮೈತ್ರಿ ಸರ್ಕಾರದ ವಿರುದ್ಧ #EmergncyInKarnataka ಎಂಬ ಹ್ಯಾಶ್ ಟಾಗ್ ನೊಂದಿಗೆ ಟ್ವೀಟ್ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು, ನಾಯಕರು ನಕಲಿ ಸುದ್ದಿಯನ್ನು ತಡೆಯಲು ಸರ್ಕಾರ ಸರಿಯಾದ ಕ್ರಮ ಕೈಗೊಂಡಿದೆ ಎಂದು ಸರ್ಕಾರವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಬೆಂಬಲಿಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos