ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪ ಚುನಾವಣೆಯಲ್ಲಿ ತಮ್ಮ ಸ್ನೇಹಿತ ಸಿ,ಎಸ್ ಶಿವಳ್ಳಿ ಅವರ ಪತ್ನಿಯನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿರುವ ಸಚಿವ ಡಿ.ಕೆ ಶಿವಕುಮಾರ್ ಅವರ ಚುನಾವಣಾ ಉಸ್ತುವಾರಿ ಕೇವಲ ಬಿಜಿಪಿ ಮಾತ್ರವಲ್ಲ ಕಾಂಗ್ರೆಸ್ ನ ಕೆಲ ನಾಯಕರಿಗೂ ನಿದ್ದೆಗೆಡಿಸಿದೆ.
ತಮ್ಮ ಸಾಮರ್ಥ್ಯದ ಮೂಲಕ ಕೈ ಅಭ್ಯರ್ಥಿಯನ್ನು ಶಿವಕುಮಾರ್ ಗೆಲ್ಲಿಸುತ್ತಾರೆ ಎಂಬುದು ಬಿಜೆಪಿ ನಾಯಕರ ಭಯವಾಗಿದೆ. ಆದರೆ ಇಡೀ ಚುನಾವಣೆ ಉಸ್ತುವಾರಿ ಡಿಕೆಶಿ ಕೈಗೆ ಹೋಗಿರುವುದು ಕಾಂಗ್ರೆಸ್ ನಾಯಕರಲ್ಲೂ ತಲ್ಲಣ ಮೂಡಿಸಿದೆ.
ಬಳ್ಳಾರಿ ಲೋಕಸಭೆ ಉಪ ಚುನಾವಣೆ ಫಲಿತಾಂಶ ಡಿಕೆಸಿ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ.ಹಣ ಮತ್ತು ತೋಳ್ಬಲ ಬಳಸಿಕೊಂಡು ಶಿವಕುಮಾರ್ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಹಣದ ಮೂಲಕ ಡಿಕೆಶಿ ಚುನಾವಣೆ ಗೆಲ್ಲುತ್ತಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಆರೋಪಿಸಿದ್ದಾರೆ.
ಕುಸುಮಾವತಿ ಶಿವಳ್ಳಿ ಗೆಲುವು ಪಕ್ಷದ ಪ್ರತಿಷ್ಠೆಯ ವಿಷಯವಾಗಿದೆ. ಡಿಕೆಶಿಗೆ ಉಸ್ತುವಾರಿ ವಹಿಸಿರುವುದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಅಸಮಾಧಾನ ಉಂಟು
ಮಾಡಿರುವುದು ನೀಜ, ಆದರೆ ಕುಸುಮಾವತಿ ಗೆಲುವಿಗಾಗಿ ಶಿವಕುಮಾರ್ ಕೈಗೊಂಡಿರುವ ಆರಂಭಿಕ ಕ್ರಮಗಳ ಬಗ್ಗೆ ಹೈಕಮಾಂಡ್ ಸಮಾಧಾನ ಗೊಂಡಿದೆ.
ಸ್ಥಳೀಯ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ್ ಗಂಭೀರ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪವು ಶಿವಕುಮಾರ್ ವಿರುದ್ದ ಕೇಳಿ ಬಂದಿದೆ. ಪ್ರತಿಯೊಬ್ಬ ನಾಯಕರು ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೋಳ್ಳಬೇಕು ಎಂದು ಶಿವಕುಮಾರ್ ಹೇಳಿದ್ದಾರೆ, ಸ್ಥಳೀಯ ನಾಯಕರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ, ಇದಕ್ಕಾಗಿ ಹೊರಗಿನಿಂದ ಜನ ಕರೆಸಲಾಗಿದೆ,. ಹೀಗಾಗಿ ಅವರ ಗುರುತು ಸಿಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ,
ಶಿವಕುಮಾರ್ ತಮ್ಮದೇ ಆದ ವಿಭಿನ್ನ ರೀತಿಯ ಚುನಾವಣಾ ತಂತ್ರವನ್ನು ಅನುಷ್ಠಾನಗೊಳಿಸಿದ್ದಾರೆ, ಅದಕ್ಕೆ ಯಾರೂ ಕೂಡ ಚಕಾರ ಎತ್ತುವಂತಿಲ್ಲ, ಶಿವಕುಮಾರ್ ಅವರಿಗೆ ಪಕ್ಷ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂದು ಮತ್ತೊಬ್ಬ ಕಾಂಗ್ರೆಸ್ ಮುಖಂಡ ತಿಳಿಸಿದ್ದಾರೆ.