ಮೈತ್ರಿ ನಾಯಕರ ಪುಟಗೋಸಿ ಹರಿದುಹೋಗಿದೆ : ಆರ್.ಅಶೋಕ್ 
ರಾಜಕೀಯ

ಮೈತ್ರಿ ನಾಯಕರ ಪುಟಗೋಸಿ ಹರಿದುಹೋಗಿದೆ: ಆರ್.ಅಶೋಕ್

ಒಣಗಿದ ಮರದ ಎಲೆಗಳಂತೆ ಉದುರಿ ಹೋಗುತ್ತಿರುವ ಕಾಂಗ್ರೆಸ್ ಶಾಸಕರಿಗೆ ಮುಂದಿನ ದಾರಿ ಕಾಣದಂತಾಗಿದ್ದು, ಮೈತ್ರಿ ನಾಯಕರ ಪುಟಗೋಸಿಯನ್ನು ರಾಜ್ಯದ ಜನ ಹರಿದುಹಾಕಿದ್ದಾರೆ ಎಂದು ಬಿಜೆಪಿ

ಬೆಂಗಳೂರು: ಒಣಗಿದ ಮರದ ಎಲೆಗಳಂತೆ ಉದುರಿ ಹೋಗುತ್ತಿರುವ ಕಾಂಗ್ರೆಸ್ ಶಾಸಕರಿಗೆ ಮುಂದಿನ ದಾರಿ ಕಾಣದಂತಾಗಿದ್ದು, ಮೈತ್ರಿ ನಾಯಕರ ಪುಟಗೋಸಿಯನ್ನು ರಾಜ್ಯದ ಜನ ಹರಿದುಹಾಕಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಆರ್.ಅಶೋಕ್ ಮೈತ್ರಿ ನಾಯಕರ ವಿರುದ್ಧ ಕುಟುಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮನ್ವಯತೆಯೇ ಇಲ್ಲದ ಸಿದ್ದರಾಮಯ್ಯ ಸಮನ್ವಯ ಸಮಿತಿಗೆ ಅಧ್ಯಕ್ಷರಾಗಿದ್ದಾರೆ.  ಸಿದ್ದರಾಮಯ್ಯ ಏನು ಹೇಳುತ್ತಾರೋ ಅದಕ್ಕೆ ವಿರುದ್ಧವಾಗಿಯೇ ಘಟನೆಗಳು ನಡೆಯುತ್ತವೆ.ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಜಪಿಸುತ್ತಿದ್ದಾರೆ. ಈಗಲೂ ಅವರ ಯೋಚನೆಗೆ ತದ್ವಿರುದ್ಧವೇ ನಡೆಯುತ್ತದೆ.  ಆತ್ಮಗೌರವ ಇದ್ದಿದ್ದೇ ಆದಲ್ಲಿ ನೈತಿಕತೆ ಹೊತ್ತು ಸಿದ್ದರಾಮಯ್ಯ ಶಾಸಕ ಸ್ಥಾನಕ್ಕೆ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಅವರು ಸವಾಲು ಹಾಕಿದರು.  ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 177 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ ಬಂದಿದೆ. 
ತಕ್ಷಣವೇ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದಲ್ಲಿ 177 ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಮುಳುಗಿದ ಹಡಗು. ಒಂದು ವರ್ಷದ ಹಿಂದೆಯೇ ಮೈತ್ರಿ ಹಡಗಿಗೆ ಶಾಸಕ ರಮೇಶ್ ಜಾರಕಿಹೊಳಿ ತೂತು ಕೊರೆದಿದ್ದರು. ಇದೀಗ ಮೈತ್ರಿಯ ಹಡಗು ಪೂರ್ತಿ ಮುಳುಗಿದೆ ಎಂದು ಆರ್.ಅಶೋಕ್ ಮಾತಿನ ಚಾಟಿ ಬೀಸಿದರು.
ಲೋಕಸಭಾ ಚುನಾವಣಾ ಸಮಯದಲ್ಲಿ ದೇವೇಗೌಡ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸೇರಿದಂತೆ ಮೈತ್ರಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗಳಿದ್ದರು. ಬಿಜೆಪಿಯ ರಾಜ್ಯಾಧ್ಯಕ್ಷರನ್ನು ಕಳ್ಳ, ಸುಳ್ಳ, ಜೈಲಿಗೆ ಹೋಗಿ ಬಂದವರೆಂದು ಟೀಕಿಸಿದ್ದರು. ಮೋದಿ, ಯಡಿಯೂರಪ್ಪ ಅವರನ್ನು ನಿಂದಿಸಿದವರಿಗೆ ಈಗ ಯಾವ ಸ್ಥಿತಿ ಬಂದಿದೆ ಎನ್ನುವುದನ್ನು ಅವರೊಮ್ಮೆ ಅವಲೋಕಿಸಬೇಕು. ಇನ್ನು ಮುಂದಾದರೂ ಯಡಿಯೂರಪ್ಪ ಅವರಿಗೆ ಮೈತ್ರಿ ನಾಯಕರು ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಲಿ ಎಂದು ಸಲಹೆ ನೀಡಿದರು.
ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದರು. ಆದರೀಗ ನಿಂಬೆಹಣ್ಣು ಇಟ್ಟು ಸಮಯ ನೋಡುವ ಪರಿಸ್ಥಿತಿ ಅವರಿಗೆ ಬಂದಿದೆ. ಆದಷ್ಟು ಬೇಗ ನಿಂಬೆಹಣ್ಣು ರೇವಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ತುಮಕೂರಿನಲ್ಲಿ ದೇವೇಗೌಡರು ಸೋತರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಚಿವರಾದ ಗುಬ್ಬಿ ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು  ಹೇಳಿಕೆ ನೀಡಿದ್ದರು. ಜಮೀರ್ ಅಹ್ಮದ್ ಕಾವಲುಗಾರನಾಗುವುದಾಗಿ ಹೇಳಿಕೆ ನೀಡಿದ್ದರು. ಈಗ ಅವರೆಲ್ಲರೂ ಹೇಳಿದಂತೆ ನಡೆದುಕೊಳ್ಳುತ್ತಾರೆಯೇ ಎಂದು ಅಶೋಕ್ ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

Nation survey: ಇಂದೇ ಲೋಕಸಭೆ ಚುನಾವಣೆ ನಡೆದರೆ NDA ಎಷ್ಟು ಸ್ಥಾನ ಗೆಲ್ಲುತ್ತೆ ಗೊತ್ತಾ?

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

ಯಾವುದೇ ವ್ಯಕ್ತಿ 75 ವರ್ಷಗಳಿಗೆ ನಿವೃತ್ತಿಯಾಗಬೇಕು ಎಂದು ಎಂದಿಗೂ ಹೇಳಿಲ್ಲ: RSS ಮುಖ್ಯಸ್ಥ Mohan bhagwat ಸ್ಪಷ್ಟನೆ

SCROLL FOR NEXT