ರಾಜಕೀಯ

15 ಕ್ಷೇತ್ರಗಳ ಉಪ ಚುನಾವಣೆ: ತಟಸ್ಥವಾಗಿರಲು ಜಿ.ಟಿ ದೇವೇಗೌಡ ನಿರ್ಧಾರ

Shilpa D

ಮೈಸೂರು: ಡಿಸೆಂಬರ್ ನಲ್ಲಿ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ತಾವು ತಟಸ್ಥರಾಗಿರುವುದಾಗಿ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಉಪಚುನಾವಣೆಯಲ್ಲಿ ತಮ್ಮ ಕುಟುಂಬದವರು ಸ್ಪರ್ಧಿಸುವಂತೆ ಯಾವ ಪಕ್ಷದವರು ಹೇಳಿಲ್ಲ. ನಾವು ಸಹ ಯಾವ ಪಕ್ಷದಿಂದಲೂ ಟಿಕೆಟ್ ಕೇಳಿಲ್ಲ ಎಂದು ತಿಳಿಸಿದರು.

ಕಳೆದ ಕೆಲವು ತಿಂಗಳುಗಳಿಂದ ಜೆಡಿಎಸ್ ನಿಂದ ದೂರ ಉಳಿದಿರುವ ಜಿಟಿಡಿ ಬಿಜೆಪಿ ಪರ ಆಗಾಗ್ಗೆ ಬ್ಯಾಟಿಂಗ್ ಮಾಡುತ್ತಿದ್ದರು. ಸದ್ಯ ತಟಸ್ಥರಾಗಿರುವ ನಿರ್ಧಾರ ಕೈಗೊಂಡಿರುವುದು ಬಿಜೆಪಿಯ ಕೆಲವು ನಾಯಕರಲ್ಲಿ ಆತಂಕ ಮೂಡಿಸಿದೆ.

ಉಪಚುನಾವಣೆಯ ಯಾವುದೇ ಕಾರ್ಯಗಳಲ್ಲಿಯೂ ನಾನು ತೊಡಗಿಸಿ ಕೊಳ್ಳುವುದಿಲ್ಲ. ನನ್ನ ಕ್ಷೇತ್ರದ ಜನತೆಯ ಕೆಲಸ ಕಾರ್ಯ ಮಾಡಲು ಉತ್ಸುಕನಾಗಿದ್ದೇನೆ ಹೊರತು ಉಪಚುನಾವಣೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳಿದರು. 

ಆದರೆ ಜಿಟಿಡಿ ನಿರ್ಧಾರದಿಂದ ಕೆಲವರು ಬಿಜೆಪಿ ನಾಯಕರು ಆತಂಕಗೊಂಡಿರುವುದಂತು ನಿಜ, ಹೀಗಾಗಿ ಸಿಎಂ ಯಡಿಯೂರಪ್ಪ, ಸಂಸದ ಶ್ರೀನಿವಾಸ್ ಪ್ರಸಾದ್,ಮತ್ತು ಎಎಚ್ ವಿಶ್ವನಾಥ್ ಈಗಾಗಲೇ ಜಿಟಿಡಿ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿ, ಹುಣಸೂರು ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕೋರಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಸೋಲಿಸುವುದು ಶ್ರೀನಿವಾಸ್ ಪ್ರಸಾದ್ ಮತ್ತು ವಿಶ್ವನಾಥ್ ಅವರುಗಳ ಕಾಮನ್ ಅಜೆಂಡಾವಾಗಿದ್ದು, ಇದಕ್ಕೆ ಜಿಟಿಡಿ ಸಹಕಾರ ಕೋರಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಇದಕ್ಕೆ ಪ್ರತಿಯಾಗಿ ಜೆಡಿಎಸ್ ಸಾ.ರಾ ಮಹೇಶ್ ಒಕ್ಕಲಿಗ ಸಮುದಾಯದ ಮತಗಳನ್ನು ಜೆಡಿಎಸ್ ಪರವಾಗಿಸಲು ಟೊಂಕಕಟ್ಟಿ ನಿಂತಿದ್ದಾರೆ, ಇದೇ ವೇಳೆ ಕೆಲವು ಕಾಂಗ್ರೆಸ್ ನಾಯಕರು ಕೂಡ ಜಿಟಿಡಿ ಬೆಂಬಲ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ,

SCROLL FOR NEXT