ರಾಜಕೀಯ

ಭಿನ್ನಮತ, ಒಳಜಗಳ ಶಮನಕ್ಕೆ ಸಾಮೂಹಿಕ ನಾಯಕತ್ವ ಬೇಕೆಂದ ಕಾಂಗ್ರೆಸ್ ನಾಯಕರು

Manjula VN

ಬೆಂಗಳೂರು: ಉಪ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಕಾಂಗ್ರೆಸ್ ಪಾಳಯದಲ್ಲಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಕಾಂಗ್ರೆಸ್ ನಲ್ಲಿ ನಾಯಕರಿಗೆ ಅಧಿಕಾರದ ದಾಹ ಹೆಚ್ಚಾದಂತಿದೆ. ಕೆಪಿಸಿಸಿ ನೇಮಕಾತಿ, ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಪಕ್ಷದಲ್ಲಿ ಕಿತ್ತಾಟ ಶುರುವಾಗಿದ್ದು, ಭಿನ್ನಮತ ಹಾಗೂ ಒಳಜಗಳ ಶಮನಕ್ಕೆ ಸಾಮೂಹಿತ ನಾಯಕತ್ವದ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ. 

ಒಳಜಗಳ ಹೆಚ್ಚಾದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರಿಗೆ ಆಪ್ತರಾಗಿರುವ  ಇತ್ತೀಚೆಗಷ್ಟೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ನಿರ್ಣಾಯಕ ಸಭೆ ಕರೆದಿದ್ದರು. 

ಸಭೆಯಲ್ಲಿ ಉಪ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ, ಉಪ ಚುನಾವಣೆಗಿಂತಲೂ ಇತರೆ ವಿಚಾರಗಳ ಬಗ್ಗೆಯೇ ಸಭೆಯಲ್ಲಿ ಹೆಚ್ಚು ಚರ್ಚೆ ನಡೆದಿದೆ.

ಸಭೆಯಲ್ಲಿ ಕಾಂಗ್ರೆಸ್ ನಾಯಕರು ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ನಮ್ಮ ಸಲಹೆ ಪಡೆದುಕೊಳ್ಳದೆಯೇ ದಿನೇಶ್ ಗುಂಡೂ ರಾವ್ ಅವರು, ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಕಾಂಗ್ರೆಸ್ ಬಲಿಷ್ಠವಾಗಿರುವ ಒಂದೇ ಒಂದು ರಾಜ್ಯವೆಂದರೆ ಅದು ಕರ್ನಾಟಕ, ಆದರೆ, ಇಲ್ಲಿನ ನಾಯಕತ್ವ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ನಾಯಕರೊಬ್ಬರು ಹೇಳಿಕೊಂಡಿದ್ದಾರೆ. 

ವೇಣುಗೋಪಾಲ್, ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ವಿರುದ್ಧ ರೋಷನ್ ಬೇಗ್ ಅವರು ಈ ಹಿಂದೆ ಹರಿಹಾಯ್ದಿದ್ದರು. ಇದಕ್ಕೆ ತಕ್ಕ ಬೆಲೆಯನ್ನು ತೆತ್ತಿದ್ದಾರೆ. ಇದೀಗ ಕೆ.ಹೆಚ್ ಮುನಿಯಪ್ಪ ಅವರು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಮುನಿಯಪ್ಪ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ದೂರು ಕೂಡ ದಾಖಲಿಸಿದ್ದಾರೆ. 

ಈ ನಡುವೆ ಬಿ.ಕೆ ಹರಿಪ್ರಸಾದ್ ಅವರೂ ಮೂವರು ನಾಯಕರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಮುನಿಯಪ್ಪ ಅಷ್ಟೇ  ಅಲ್ಲದೇ ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ನಾಯಕರು ಪಾರದರ್ಶಕ ಹಾಗೂ ಸಾಮೂಹಿಕ ನಾಯಕತ್ವಕ್ಕಾಗಿ ಆಗ್ರಹಿಸುತ್ತಿದ್ದಾರೆ. 

SCROLL FOR NEXT