ರಾಜಕೀಯ

ಮಹಾರಾಷ್ಟ್ರ ಚುನಾವಣೆ: ಬಿಜೆಪಿ ಟೀಕಿಸಿ ತಾನೂ ಪ್ರಚಾರಕ್ಕಿಳಿದ ಕಾಂಗ್ರೆಸ್ 

Manjula VN

ಬೆಂಗಳೂರು: ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ತೆರಳಿರುವ ಬಿಜೆಪಿ ನಾಯಕರು ರಾಜ್ಯದ ನೆರೆ ಪರಿಹಾರ ಕಾರ್ಯವನ್ನು ನಿರ್ಲಕ್ಷಿಸುತ್ತಿದ್ದಾರೆಂದು ಟೀಕೆಗಳನ್ನು ಮಾಡಿದ್ದ ರಾಜ್ಯ ಕಾಂಗ್ರೆಸ್ ನಾಯಕರೇ ಇದೀಗ ತಮ್ಮ ಅಭ್ಯರ್ಥಿ ಪರವಾಗಿ ಮಹಾರಾಷ್ಟ್ರದಲ್ಲಿ ಪ್ರಚಾರ ಕಾರ್ಯ ನಡೆಸಲು ಆರಂಭಿಸಿದ್ದಾರೆ. 

ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಉಪ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸುವ ಸಲುವಾಕಿ ಕೇರಳದ ಕಾಸರಗೋಡಿಗೆ ತೆರಳಲಿದ್ದಾರೆ. ಈ ಸಂಬಂಧ ನಿನ್ನೆ ಹಲವು ಸಭೆಗಳು ಹಾಗೂ ಜಾಟ್, ಸಾಂಗ್ಲಿ, ಮಹಾರಾಷ್ಟ್ರದ ಅಕ್ಕಲ್ಕೋಟ್ ನಲ್ಲಿ ನಡೆದ ರ್ಯಾಲಿಗಳಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ರ್ಯಾಲಿಯಲ್ಲಿ ನೂರಾರು ಬೆಂಬಲಿಗರು ಭಾಗಿಯಾಗಿದ್ದರು. 

ಸಭೆ ಹಾಗೂ ರ್ಯಾಲಿಗಳಲ್ಲಿ ಸಿದ್ದರಾಮಯ್ಯ ಅವರು ಬೆಂಬಲಿಗರನ್ನುದ್ದೇಶಿಸಿ ಕನ್ನಡದಲ್ಲಿಯೇ ಮಾತನಾಡಿದರು. ಕೊಲ್ಲಾಪುರ, ಸಾಂಗ್ಲಿ, ಸೋಲಾಪುರ, ಉಸ್ಮಾನಾಬಾದ್, ಲಾತೂರ್, ನಂದೇಡ್, ಯವತ್ಮಾಲ್, ಚಂದ್ರಾಪುರ್, ಗಡ್ಚಿರೊಲಿ ಗಡಿ ಜಿಲ್ಲೆಗಳಾಗಿದ್ದು, ಇಲ್ಲಿನ ಜನರು ಕನ್ನಡ ಭಾಷೆಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಕರ್ನಾಟಕ ಸಾಕಷ್ಟು ನಾಯಕರನ್ನು ಇಲ್ಲಿನ ಜನರು ಅನುಸರಿಸುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಚಾರದ ಅಬ್ಬರ ಮತ್ತಷ್ಟು ಜೋರಾಗಲಿದೆ. 

ಮಹಾರಾಷ್ಟ್ರದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವಹಿಸಿರುವ ಮಲ್ಲಿಕಾರ್ಜುನ ಖರ್ಗೆ ಅಷ್ಟೇ ಅಲ್ಲದೆ, ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಾದ ಎಂ.ಬಿ.ಪಾಟೀಲ್, ಶಾಸಕ ಆನಂದ್ ನ್ಯಾಮಗೌಡ, ಯಶವಂತ್ ರಾಯ್ ಗೌಡ, ಪ್ರಕಾಶ್ ಹುಕ್ಕೇರಿ ಸೇರಿದಂತೆ ಹಲವು ನಾಯಕರಿಗೆ ಮಹಾರಾಷ್ಟ್ರದೊಂದಿಗೆ ಸಂಪರ್ಕವಿದೆ. 

ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರು ಭಾಗಿಯಾಗುವ ಅವಶ್ಯಕವಿದೆ. ಏಕೆಂದರೆ, ಎರಡೂ ರಾಜ್ಯಗಳ ನಡುವೆ ಬಲವಾದ ಸಂಪರ್ಕವಿದೆ. ಇದನ್ನು ನಿಜಾಮನ ಭೂಭಾಗ ಅಥವಾ ಬಾಂಬೆ ಪ್ರೆಸಿಡೆನ್ಸಿ ಭಾಗವೆಂದು ಪರಿಗಣಿಸಲಾಗುತ್ತಿದೆ. ಮುಂಬೈ ಮತ್ತು ಪುಣೆಯಲ್ಲಿ ಕನ್ನಡ ಮಾತನಾಡುವ ಜನರಿದ್ದಾರೆ. ಕನ್ನಡ ರಾಜ್ಯೋತ್ಸವವನ್ನು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. 

ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಹಾಗೂ ಭಲ್ಕಿ ಶಾಸಕ ಈಶ್ವರ್ ಖಂಡ್ರೆಯವರು ಮಹಾರಾಷ್ಟ್ರ ಮೂಲದವರಾಗಿದ್ದು, ಇವರು ನಿಲಾಂಗ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. 

SCROLL FOR NEXT