ರಾಜಕೀಯ

ಸಾವರ್ಕರ್ ವಿಷಯ ಬಿಟ್ಟು ಸಮಸ್ಯೆ ಕುರಿತು ಚರ್ಚೆಯಾಗಲಿ: ಬಿಜೆಪಿಗರ ಕಾಲೆಳೆದ ಸಿದ್ದರಾಮಯ್ಯ

Shilpa D

ಬೆಂಗಳೂರು: ಮಹಾರಾಷ್ಟ್ರ ಚುನಾವಣೆ ಮುಗಿದಿರುವುದರಿಂದ ಬಿಜೆಪಿ ನಾಯಕರು ವಿ.ಡಿ.ಸಾವರ್ಕರ್ ಬಗ್ಗೆ ಮಾತನಾಡುವುದನ್ನು ಬಿಟ್ಟು ಈಗಲಾದರೂ ರಾಜ್ಯ ಹಾಗೂ ದೇಶದಲ್ಲಿನ ಸಮಸ್ಯೆಗಳ ನಿವಾರಣೆ ಮತ್ತು ಅಭಿವೃದ್ಧಿಯ ಬಗ್ಗೆ ಗಮನ ಹರಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ.

ಮುಂದಿನ ಚುನಾವಣೆ ಸಂದರ್ಭದಲ್ಲಿ ವಿ.ಡಿ.ಸಾವರ್ಕರ್ ಬಗ್ಗೆ ಮಾತನಾಡೋಣ‌. ಈಗ ತುರ್ತಾಗಿ ನಿರುದ್ಯೋಗ, ಬೆಲೆ ಏರಿಕೆ, ದಿವಾಳಿಯಾಗುತ್ತಿರುವ ಬ್ಯಾಂಕ್‌ಗಳು, ರೈತರ ಕಷ್ಟಗಳು, ನೆರೆ-ಬರದ ಬಗ್ಗೆ ಚರ್ಚೆ ಮಾಡೋಣ ಎಂದು ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಬಿಜೆಪಿ ನಾಯಕರ ಗಮನವನ್ನು ಮತ್ತೆ ತಮ್ಮತ್ತ ಕೇಂದ್ರೀಕರಿಸಿದ್ದಾರೆ.

ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಬಿಜೆಪಿ ವಿ.ಡಿ.ಸಾವರ್ಕರ್ ಗೆ ಭಾರತರತ್ನ ಕೊಡುವುದಾಗಿ ಕಾರ್ಯಸೂಚಿ ರೂಪಿಸಿತ್ತು‌‌. ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್, ಟ್ವೀಟ್ ಸಮರವೂ ಜೋರಾಗಿ ನಡೆದಿತ್ತು. ಇದೀಗ ಚುನಾವಣೆ ಮುಗಿದಿದ್ದು, ಈಗಲಾದರೂ ಸಾವರ್ಕರ್ ವಿಚಾರ ಹಿಂದೆ ಸರಿಯಲಿ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ವಿಎಂ ಅನ್ನು ಅಮೆರಿಕಾ, ಜಪಾನ್ ಸೇರಿದಂತೆ ಬಹುತೇಕ ರಾಷ್ಟ್ರಗಳು ಒಪ್ಪಿಲ್ಲ. ದೇಶದ ಜನರು ಸಹ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಚುನಾವಣಾ ಆಯೋಗ ಇವಿಎಂ ಅನ್ನೇ ಏಕೆ ಬಳಸುತ್ತಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಿಜೆಪಿ ತಮಗೆ ಗೆಲ್ಲಲು ಎಷ್ಟು ಬೇಕೋ ಅಷ್ಟು ಇವಿಎಂಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ. ಎಲ್ಲಾ ಬೂತ್ ಗಳಲ್ಲಿ ಅವರು ಇವಿಎಂ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಆಯ್ದ ಭಾಗಗಳಲ್ಲಿ ಮಾತ್ರ ಇವಿಎಂ ಅನ್ನು ಸೆಟ್ ಮಾಡಿಕೊಳ್ಳುತ್ತಿದೆ ಎಂದು ನೇರವಾಗಿ ಆರೋಪಿಸಿದರು.

ದೇಶದಲ್ಲಿ ಹಿಂದೂತ್ವ ಮುನ್ನಡೆಸಿದ್ದೇ ವಿ.ಡಿ.ಸಾವರ್ಕರ್.‌ ಗಾಂಧೀ ಹತ್ಯೆ ಆರೋಪ ಇವರ ಮೇಲಿದೆ. ಇವರ ಪ್ರಕರಣ ವಜಾ ಆಗಿರಬಹುದು. ಹಲವು ಕೊಲೆ ಪ್ರಕರಣಗಳು ವಜಾ ಆಗುತ್ತವೆ. ಅಂದ ಮಾತ್ರಕ್ಕೆ ಕೊಲೆಯೇ ಆಗಿಲ್ಲ ಎಂದಲ್ಲ. ಸಾವರ್ಕರ್ ಮೇಲಿನ ಆರೋಪ ಸುಳ್ಳು ಆಗಲು ಸಾಧ್ಯವಿಲ್ಲ. ಬಹುತ್ವದ ದೇಶದಲ್ಲಿ ಹಿಂದೂತ್ವದ ಹೆಸರಿನಲ್ಲಿ ಬೆಂಕಿ ಹಚ್ಚುವುದು ಸರಿಯಲ್ಲ ಎಂದರು. ಬಹಳ ಜನ ದೇಶಕ್ಕಾಗಿ ಹೋರಾಟ ಮಾಡಿ ಜೈಲಿಗೆ ಹೋಗಿರಬಹುದು. ಆದರೆ ಸಮಾಜವನ್ನು ಒಡೆಯುವುದು ಸರಿಯೇ? ಎಂದು ಪ್ರಶ್ನಿಸಿದರು.

ಸಾವರ್ಕರ್ ಬದಲಿಗೆ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸ್ಫೋಟಕ್ಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯವೇ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದರು.

SCROLL FOR NEXT