ರಾಜಕೀಯ

ಆಪರೇಷನ್ ಕಮಲದ ಬಗ್ಗೆ ಕಠುವಾಗಿ ಮಾತನಾಡಿದ್ದಕ್ಕಾಗಿ ಡಿಕೆಶಿಗೆ ಈ ಶಿಕ್ಷೆ : ಎಚ್ ಡಿ ದೇವೇಗೌಡ

Shilpa D

ಬೆಂಗಳೂರು: ಡಿಕೆ ಶಿವಕುಮಾರ್​ ಅವರ ಬಂಧನ ರಾಜಕೀಯಪ್ರೇರಿತವಾಗಿದ್ದು, ಸಮ್ಮಿಶ್ರ ಸರ್ಕಾರದ ವಿಶ್ವಾಸ ಗೊತ್ತುವಳಿ ಚರ್ಚೆಯ ವೇಳೆ ಬಿಜೆಪಿಯ ಆಪರೇಷನ್ ಕಮಲದ ಬಗ್ಗೆ ಕಠೋರವಾಗಿ ಮಾತನಾಡಿದ್ದಕ್ಕಾಗಿ ಅವರಿಗೆ ಸಿಕ್ಕಿರುವ ಬಳುವಳಿ ಇದು ಎಂದು ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡ ವಿಶ್ಲೇಷಣೆ ಮಾಡಿದ್ದಾರೆ. 
 
ನಗರದ ಜೆ ಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್​ ಮತ್ತು ಜೆಡಿಎಸ್​ನ 17 ಶಾಸಕರನ್ನು ಬಿಜೆಪಿ ಹೇಗೆ ಅಪಹರಿಸಿದರು. ಶಾಸಕರಿಗೆ ಎಷ್ಟೆಷ್ಟು ಹಣ ಕೊಟ್ಟು ಕುದುರೆ ವ್ಯಾಪಾರ ನಡೆಸಿದರು ಎಂಬ ಮಾಹಿತಿಯನ್ನು ಕಠೋರ ಶಬ್ದಗಳಲ್ಲಿ ಡಿ ಕೆ ಶಿವಕುಮಾರ್ ವಿಧಾನ ಸಭೆಯಲ್ಲಿ ಟೀಕಿಸಿದರು. ಅವರ ಟೀಕಾ ಪ್ರಹಾರ ಕೇಂದ್ರದ ಬಿಜೆಪಿ ನಾಯಕರಿಗೆ ನೋವುಂಟು ಮಾಡಿದ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದಿರಬಹುದು. ಎರಡು ವರ್ಷಗಳಿಂದ ಇಲ್ಲದ ತನಿಖೆ ಈಗೇಕೆ ಬಂತು ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದರು.
 
ಡಿಕೆ ಶಿವಕುಮಾರ್ ಅವರ ಕನಕಪುರ, ಬೆಂಗಳೂರು, ದೆಹಲಿ ಮನೆಗಳ ಮೇಲೆ ದಾಳಿ ನಡೆಸಿದ್ದು ಹಾಗೂ  ಸಮ್ಮಿಶ್ರ ಸರ್ಕಾರವನ್ನು ಸಮರ್ಥಿಸಿಕೊಂಡರೆ ತಮಗೆ ಕಷ್ಟ ಎದುರಾಗಬಹುದು ಎಂಬುದು ತಿಳಿದಿದ್ದೂ  ಡಿ ಕೆ ಶಿವಕುಮಾರ್​ ಧೈರ್ಯವಾಗಿ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸಿದರು. ನ್ಯಾಯಾಲಯದಲ್ಲಿ ಡಿ ಕೆ ಶಿವಕುಮಾರ್​ ಅವರಿಗೆ ನ್ಯಾಯ  ಸಿಗುವ ವಿಶ್ವಾಸವಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. 

ಸಾವನ್ನಪ್ಪಿದ ಹಿರಿಯರಿಗೆ ಪಿತೃಕಾರ್ಯ ಮಾಡುವುದು ನಮ್ಮಲ್ಲಿ ತುಂಬಾ ಶ್ರೇಷ್ಠವಾದದ್ದು, ಒಂದು ದಿನವೂ  ವಿಚಾರಣೆಗೆ ತಪ್ಪಿಸಿಕೊಳ್ಳದೆ ಹಾಜರಾದರೂ ಹಿರಿಯರಿಗೆ ಎಡೆ ಇಡುವ ಕಾರ್ಯಕ್ಕೂ ಅವಕಾಶ ಕೊಡದೆ ನಿಷ್ಕರುಣೆಯಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜಾರಿ ನಿರ್ದೇಶನಾಲಯದ ತನಿಖೆಗೆ ಶಿವಕುಮಾರ್ ಎಲ್ಲಾ ರೀತಿಯಲ್ಲಿ ಸಹಕಾರ ನೀಡಿದ್ದರು. ಹಬ್ಬದಂದು ಅವರ  ಕುಟುಂಬದ ಕಾರ್ಯ ನೆರವೇರಿಸಲು ಸಹ ಅವಕಾಶ ನೀಡದೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿಷ್ಕರುಣೆಯಿಂದ ನಡೆದುಕೊಂಡಿದ್ದಾರೆ. ಅಧಿಕಾರಿಗಳ ಈ ಕ್ರಮ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಿವಕುಮಾರ್ ಅವರ ತಂದೆಗೆ ಎಡೆ ಇಡುವ ಕಾರ್ಯಕ್ಕೂ ಸಹ  ಅವಕಾಶ ನೀಡದಿರುವ ಘಟನೆ ತಮ್ಮ ಮನಸಿಗೆ ಬೇಸರ ಉಂಟು ಮಾಡಿದೆ. ಒಂದು ದಿನ ಅವಕಾಶ ನೀಡಿದ್ದರೆ ಏನಾಗುತ್ತಿತ್ತು ? ಎಂದು ಪ್ರಶ್ನಿಸಿದ ಅವರು, ಶಿವಕುಮಾರ್ ಅವರ ಬಂಧನ ರಾಜಕೀಯ ಪ್ರೇರಿತ ಎಂದರು.

SCROLL FOR NEXT