ರಾಜಕೀಯ

ರಾಮಮಂದಿರ, ಏಕರೂಪ ನಾಗರೀಕ ಸಂಹಿತೆ ಜಾರಿ ಬಿಜೆಪಿಯ ಗುರಿ: ಡಿಸಿಎಂ ಅಶ್ವಥ್ ನಾರಾಯಣ್ 

Lingaraj Badiger

ಮೈಸೂರು: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದು, ನಮ್ಮ ಮುಂದಿನ ಗುರಿ ರಾಮಮಂದಿರ ನಿರ್ಮಾಣ ಹಾಗೂ ಏಕರೂಪ ನಾಗರೀಕ ಸಂಹಿತೆ ಜಾರಿ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಅವರು ಶುಕ್ರವಾರ ಹೇಳಿದ್ದಾರೆ. 

ಮೈಸೂರು ನಗರ ಹಾಗೂ ಗ್ರಾಮಾಂತರ ಬಿಜೆಪಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತಾ ಅಭಿಯಾನದ ಅಂಗವಾಗಿ 'ಒಂದು ದೇಶ ಒಂದು ಸಂವಿಧಾನ ಜನ ಜಾಗೃತಿ ಸಭೆ' ಹಾಗೂ 370ನೇ ವಿಧಿ ಕುರಿತ ಸಂವಾದ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಆಶ್ವಥ್ ನಾರಾಯಣ ಉದ್ಘಾಟಿಸಿ ಮಾತನಾಡಿದರು.

ಮೈಸೂರು ಎಂದಾಕ್ಷಣ ಮಹಾರಾಜರ ಆಡಳಿತ ನಮಗೆ ನೆನಪಿಗೆ ಬರುತ್ತದೆ. ಇಂತಹದೊಂದು ನಗರದಲ್ಲಿ ನಾನು ಮೊದಲ ಸಭೆಯಯ ಭಾಗವಹಿಸುತ್ತಿರುವುದು ಸಂತಸದ ವಿಷಯ. ದೇಶದಲ್ಲೇ ಸ್ವಚ್ಚ ನಗರ ಎಂಬ ಖ್ಯಾತಿಯೂ ಇದೆ ಎಂದರು.

ಕಾಶ್ಮೀರಕ್ಕೆ ತಾತ್ಕಾಲಿಕ ವಿಶೇಷವಾಗಿ ನೀಡಿದ ಸ್ಥಾನಮಾನ ಸಾಕಷ್ಟು ಚೆರ್ಚೆಗೆ ಗ್ರಾಸವಾಯಿತು. ಲೋಹಿಯಾ ಸೇರಿ ಸಾಕಷ್ಟು ಮಂದಿ ಇದನ್ನು ವಿರೋಧಿಸಿದ್ದರು. ಒಂದೇ ಸಂವಿಧಾನ ಇರುವ ದೇಶಕ್ಕೆ ಎರಡು ಪ್ರಧಾನಮಂತ್ರಿ, ಎರಡು ಆಡಳಿತ ನಡೆಸಬೇಕಾಗಿತ್ತು. ಲೆಕ್ಕ ಇಲ್ಲ, ಆಡಳಿತವಿಲ್ಲದೆ, ಪಾರದರ್ಶಕವಾಗಿರಲಿಲ್ಲ. ಭಾವನಾತ್ಮಕವಾಗಿ ಜನರನ್ನು ಕೆರಳಿಸುವ ಕೆಲಸ ಮಾಡಲಾಗುತ್ತಿತ್ತು. ಪ್ರತ್ಯೇಕ ದೇಶ ಮಾಡಿಕೊಳ್ಳಬಹುದೆಂಬ ಚಿಂತನೆಯನ್ನು ತುಂಬಿ ಸರ್ಕಾರ ಹಾಗೂ ಜನರ ನಡುವೆ ಘರ್ಷಣೆಗೂ ಕಾರಣವಾಗಿತ್ತು. ಆದರೆ ಅದಕ್ಕೆಲ್ಲಾ ಬಿಜೆಪಿ ತಡೆಯೊಡ್ಡಿದೆ ಎಂದರು.

42 ಸಾವಿರ ಮಂದಿ ಸಾವನ್ನಪ್ಪಿ, ಸರಿಯಾದ ಕಾರಣ ಇಲ್ಲದೆ ಅಮಾಯಕರು ತ್ಯಾಗ ಮಾಡಿದ್ದರು. ನಿತ್ಯವೂ ಶಾಂತಿ ಇಲ್ಲದೆ, ಗೊಂದಲ ಉಂಟಾಗಿತ್ತು. ಒಂದು ಕಡೆ ಭ್ರಷ್ಟಾಚಾರ, ಸಾವು ನೋವು ಹಾಗೂ ಯುವಕರಿಗೆ ಉದ್ಯೋಗ ಭದ್ರತೆ ಇಲ್ಲದಿರುವುದು. ಹೀಗೆ ಇಡೀ ವಿಶ್ವಕ್ಕೆ ಇಲ್ಲಿ ಶಾಂತಿ ಇಲ್ಲವೆಂಬಂತೆ ಪಾಕಿಸ್ತಾನ ಬಿಂಬಿಸುವ ಕೆಲಸ ಮಾಡುತ್ತಿತ್ತು. ಕಾಶ್ಮೀರ ವಿಚಾರವಾಗಿಯೇ ಬೇರೆ ರಾಷ್ಟ್ರಗಳಿಂದ ವ್ಯವಹಾರಿಕವಾಗಿ ಮುಂದುವರೆಯಲು ಆಗದ ರೀತಿ ಗೊಂದಲ ನಿರ್ಮಿಸಿದ್ದರು. ಪಾಕಿಸ್ತಾನಕ್ಕೆ ಇತರ ದೇಶಗಳು ಬೆಂಬಲ ಕೊಟ್ಟು ದೇಶದ ಏಳಿಗೆಯನ್ನು ಸಹಿಸದೇ ನಿಯಂತ್ರಿಸಲು ಪ್ರಯತ್ನಿಸಿದ್ದೇವು ಎಂದು ಅವರು ಹೇಳಿದರು.

ರಾಮಮಂದಿರ ನಿರ್ಮಾಣ, 370ನೇ ವಿಧಿ ರದ್ದು ಹಾಗೂ ಏಕರೂಪ ನಾಗರೀಕ ಸಂಹಿತೆ ಈ ಮೂರು ವಿಚಾರಗಳನ್ನು ಬಗೆಹರಿಸಲು ಬಿಜೆಪಿ ಕಂಕಣ ಬದ್ಧವಾಗಿತ್ತು. ಪ್ರತಿಪಕ್ಷಗಳು ಸಹ ನಮ್ಮಿಂದ ಇದಾಗದೂ ಎಂದು ಹೇಳುತ್ತಿದ್ದರು. ಶಾಂತಿ, ನೆಮ್ಮದಿಗಾಗಿ ಭಯೋತ್ಪಾದನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದೊಂದು ಮಹತ್ವದ ನಿರ್ಧಾರವಾಗಿದೆ. ಅಜಾದಿ ಎಂಬ ಪದವನ್ನೇ ಮರೆ ಮಾಚುವ ಕೆಲಸ ನಡೆಯುತ್ತಿದೆ ಎಂದರು.

ಒಂದು ಹೆಜ್ಜೆ ಮುಂದು ಹೋಗಿ ಲಡಾಕ್ ಕೇಂದ್ರಾಡಳಿತ ಪ್ರದೇಶ ಮಾಡಿ ಸಮಸ್ಯೆಗೆ ಪರಿಹಾರ ತರುವ ಕೆಲಸ ಮಾಡುತ್ತಿದ್ದೇವೆ. ಅಖಂಡತೆಯ ಸಂದೇಶವನ್ನು ಸುಲಭವಾಗಿ ಮಾಡುತ್ತಿದ್ದೇವೆ. ಭಯೋತ್ಪಾದನೆ ನಿಯಂತ್ರಣಕ್ಕೆ ಹೆಚ್ಚಿನ ಹಣ ವ್ಯಯಿಸಿಲಾಗುತ್ತಿದ್ದು, ಈಗ ಎಲ್ಲವೂ ಕಡಿತವಾಗಿದೆ ಎಂದು ಹೇಳಿದರು.

SCROLL FOR NEXT