ಬೆಂಗಳೂರು: ಅಂತೂ ಇಂತೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ದಿಲ್ಲಿ ಭೇಟಿ ಫಲಪ್ರದವಾಗಿದೆ.
ಉಪಚುನಾವಣೆ ಅನಂತರ ಪ್ರತಿದಿನವೂ ಸದ್ದು ಮಾಡುತ್ತಿದ್ದ “ಸಂಪುಟ ವಿಸ್ತರಣೆ’ಗಾಗಿ ದಿಲ್ಲಿ ವರಿಷ್ಠರಿಂದ ಒಪ್ಪಿಗೆ ಪಡೆದಿರುವ ಬಿಎಸ್ವೈ, ನಗುಮೊಗದಲ್ಲೇ ಇನ್ನು 3 ದಿನಗಳಲ್ಲಿ ಹೊಸ ಸಚಿವರ ಪ್ರಮಾಣ ವಚನ ಖಚಿತ ಎಂಬ ಸಂದೇಶ ರವಾನಿಸಿದ್ದಾರೆ.
ಆದರೆ ಈ ಬಾರಿಯ ಸಂಪುಟ ವಿಸ್ತರಣೆನಂತರ ಅಸಮಾಧಾನ ಭುಗಿಲೇಳುವುದು ಕಟ್ಟಿಟ್ಟ ಬುತ್ತಿ. ಏಕೆಂದರೆ ಹೊಸದಾಗಿ ಆಯ್ಕೆಯಾದ 11 ಶಾಸಕರ ಪೈಕಿ ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ್ ಪಾಟೀಲ್ ಅವರುಗಳನ್ನು ಮಂತ್ರಿ ಮಾಡುವಲ್ಲಿ ಹೈಕಮಾಂಡ್ ನಿರ್ಲಕ್ಷ್ಯ ತೋರಿದೆ ಎಂದು ಹೇಳಲಾಗುತ್ತಿದೆ. ಆದರೆ ಸಿಎಂ ಯಡಿಯೂರಪ್ಪ ಅವರಿಗೂ ಸ್ಥಾನ ನೀಡಲು ಬದ್ಧರಾಗಿದ್ದಾರೆ ಎಂದು ತಿಳಿದು ಬಂದಿದೆ.
ಉಪ ಚುನಾವಣೆಯಲ್ಲಿ ಗೆದ್ದ ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಪಕ್ಷ ಕೊಟ್ಟಿರುವ ಮಾತನ್ನು ತಪ್ಪಬಾರದು ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಸ್ಥಾನ ಕೊಡುವುದು ಪಕ್ಷದ ಪ್ರಮುಖ ಹೊಣೆಯಾಗಿದೆ. ಇಲ್ಲದಿದ್ದರೇ ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದ್ದಾರೆ.
ನೋಡಲು ಬೇಸರಗೊಂಡವರಂತೆ ಕಾಣುತ್ತಿದ್ದ ಮಹೇಶ್ ಕುಮಟಳ್ಳಿ, ಯಾರು ಸಚಿವರಾಗುತ್ತಾರೆ, ಯಾರಿಗೆ ಮಂತ್ರಿ ಸ್ಥಾನ ತಪ್ಪುತ್ತದೆ ಎಂಬುದು ನನಗೆ ಗೊತ್ತಿಲ್ಲ ಆದರೆ ಮಾಧ್ಯಮಗಳ ಊಹಾ ಪೋಹದ ಸುದ್ದಿಗಳಿಂದ ಬೇಸರವಾಗಿದೆ ಎಂದು ತಿಳಿಸಿದ್ದಾರೆ. ಒಂದು ವೇಳೆ ನನ್ನ ಸಚಿವನನ್ನಾಗಿ ಮಾಡಿದರೂ ಮಾಡದಿದ್ದರೂ ಯಾವುದೇ ರೀತಿಯ ವ್ಯತ್ಯಾಸವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಜೊತೆಗ ಈಗಾಗಲೇ ಸಚಿವರಾಗಿರುವ ಯಾರೋಬ್ಬರನ್ನು ಸಂಪುಟದಿಂದ ಕೈ ಬಿಡುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯಿಂದ ಈಗಾಗಲೇ ಹಲವು ಲಿಂಗಾಯತ ಶಾಸಕರು ಪ್ರಮುಖ ಸ್ಥಾನ ಪಡೆದಿರುವುದರಿಂದಾಗಿ ಕುಮಟಳ್ಳಿ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ, ಲಕ್ಷ್ಮಣ ಸವದಿ ಈಗಾಗಲೇ ಡಿಸಿಎಂ ಆಗಿದ್ದಾರೆ, ಇನ್ನೂ ರಮೇಶ್ ಜಾರಕಿಹೊಳಿಗೂ ಕೂಡ ಸಚಿವ ಸ್ಥಾನ ಖಚಿತವಾಗಿದೆ. ಶ್ರೀಮಂತ ಪಾಟೀಲ್ ಗೆ ಮಂತ್ರಿಗಿರಿ ನೀಡುವಂತೆ ರಮೇಶ್ ಜಾರಕಿಹೊಳಿ ದುಂಬಾಲು ಬಿದ್ದಿದ್ದಾರೆ, ಆದರೆ ಹೊಸದಾಗಿ ಸಚಿವರಾಗಿ ಆಯ್ಕೆಯಾಗುವ ಪಟ್ಟಿಯಿಂದ ಈ ಇಬ್ಬರು ಶಾಸಕರ ಹೆಸರು ಡಿಲೀಟ್ ಆಗಿದೆಯಂತೆ.
ಕುಮಟಳ್ಳಿ ಹೊರತು ಪಡಿಸಿದರೂ ಬೆಳಗಾವಿಯಿಂದ ಐದು ಬಿಜೆಪಿ ಶಾಸಕರು ಸಚಿವರಾಗಲಿದ್ದಾರೆ, ಉಮೇಶ್ ಕತ್ತಿ, ಜಾರಕಿಹೊಳಿ ಹಾಗೂ ಶ್ರೀಮಂತ್ ಪಾಟೀಲ್, ಸಚಿವಕಾಂಕ್ಷಿಗಳಾಗಿದ್ದರೇ, ಶಶಿಕಲಾ ಜೊಲ್ಲೆ, ಹಾಗೂ ಲಕ್ಷ್ಮಣ ಸವದಿ ಈಗಾಗಲೇ ಬಿಎಸ್ ವೈ ಸಂಪುಟ ಸೇರಿದ್ದಾರೆ.