ರಾಜಕೀಯ

ಸಮ್ಮಿಶ್ರ ಸರ್ಕಾರ ಪತನದ ರೂವಾರಿ 'ಸೈನಿಕ'ನಿಗೆ ಪಟ್ಟ: ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡಿದರೆ ರಾಜಿನಾಮೆ ಬೆದರಿಕೆ!

Shilpa D

ಬೆಂಗಳೂರು: ರಾಜ್ಯ ಸಂಪುಟಕ್ಕೆ ಸಿ.ಪಿ. ಯೋಗೇಶ್ವರ್ ಸೇರ್ಪಡೆಯನ್ನು ಸ್ವತಃ ಬಿಜೆಪಿ ಶಾಸಕರೇ ವಿರೋಧಿಸಿದ್ದು, ಅಕಸ್ಮಾತ್ ಯೋಗೇಶ್ವರ್ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಯಾದರೆ ತಾವು ರಾಜೀನಾಮೆ ನೀಡುವುದಾಗಿ ಹಲವರು ಬೆದರಿಕೆ ಒಡ್ಡಿದ್ದಾರೆ ಎಂದು  ಹೇಳಲಾಗಿದೆ.

ಪಕ್ಷಕ್ಕೆ ಯೋಗೇಶ್ವರ್ ಕೊಡುಗೆ ಏನು ಎಂದು ಶಾಸಕರು ಪ್ರಶ್ನಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದ ಶಾಸಕರ ಮೂಲಕ ಯೋಗೇಶ್ವರ್ ಪ್ರಯತ್ನ ಆರಂಭಿಸುತ್ತಿದ್ದಂತೆ ಶಾಸಕರು ಪ್ರತ್ಯೇಕ ಸಭೆ ಸೇರಿ, ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸದಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಲು ನಿರ್ಧರಿಸಿದ್ದಾರೆ. 

ಚುನಾವಣೆಯಲ್ಲಿ ಸೋತ ಯೋಗೇಶ್ವರ್​ಗೆ ಅವಕಾಶ ನೀಡುವುದಾದರೆ, ಗೆದ್ದಿರುವ ನಮಗೆ ಮೊದಲು ಅವಕಾಶ ನೀಡಿ. ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ್ಕೆ ಆಗಿರುವ ಮತ್ತು ಆಗುತ್ತಿರುವ ಅನ್ಯಾಯ ಸರಿಪಡಿಸಿ ಎಂದು ಆಗ್ರಹಿಸಿದ್ದಾರೆ.

ಯೋಗೇಶ್ವರ್ ಸರ್ಕಾರ ರಚನೆ ಸಂದರ್ಭ ತೋರಿಕೆಗಾಗಿ ಓಡಾಡಿದ್ದಾರಷ್ಟೇ. ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆಯಲ್ಲಿಯೂ ಅವರ ಪಾತ್ರವೇನೂ ಇಲ್ಲ. ಅವರಿಗೆ ಮಂತ್ರಿ ಸ್ಥಾನ ನೀಡಿದರೆ ಬೇರೆಯವರಿಗೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಸಕರ ಭವನದಲ್ಲಿ ಸೋಮವಾರ ಸೇಡಂ ಶಾಸಕ ರಾಜ್​ಕುಮಾರ್ ಪಾಟೀಲ್ ತೇಲ್ಕೂರ್ ಕೊಠಡಿಯಲ್ಲಿ ಸಭೆ ಸೇರಿದ್ದ ಮುರುಗೇಶ್ ನಿರಾಣಿ, ಎಂ.ಪಿ.ರೇಣುಕಾಚಾರ್ಯ, ದತ್ತಾತ್ರೇಯ ಪಾಟೀಲ್ ರೇವೂರ್, ಡಾ.ಶಿವರಾಜ್ ಪಾಟೀಲ್, ರಾಜೂಗೌಡ, ಪರಣ್ಣ ಮುನವಳ್ಳಿ, ಸೋತವರಿಗೆ ಅವಕಾಶ ಕೊಡೋದಾದ್ರೆ ವಿಶ್ವನಾಥ್ ಅಥವಾ ಎಂಟಿಬಿ ನಾಗರಾಜ್​ಗೆ ಕೊಡಿ, ಯೋಗೇಶ್ವರ್​ಗೆ ಬೇಡ. ಯೋಗೇಶ್ವರ್​ಗೆ ಅವಕಾಶ ಕೊಟ್ಟಲ್ಲಿ ಮತ್ತೆ ಅಸಮತೋಲನ ಆಗುವುದಿಲ್ಲವೇ? ಹಾಗಾದರೆ ಸೋತಿರುವ 120 ಜನರನ್ನು ಏನು ಮಾಡ್ತೀರಿ? ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

SCROLL FOR NEXT