ರಾಜಕೀಯ

ಎಚ್‌ಡಿಕೆ ಅಲ್ಲ, 'ಸಿಡಿ'ಕೆ, ಮಂಗಳೂರು ಹಿಂಸಾಚಾರ ವಿಡಿಯೋ ನಕಲಿ: ಕೆಎಸ್ ಈಶ್ವರಪ್ಪ ಕಿಡಿ

Vishwanath S

ಬೆಂಗಳೂರು: ರಾಷ್ಟ್ರದ್ರೋಹಿಗಳಿಗೆ ಬೆಂಬಲವಾಗಿ ನಿಂತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಜನರು ಛೀಮಾರಿ ಹಾಕುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ. 
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಸಿ.ಡಿ. ಬಿಡುಗಡೆ ಮಾಡಿರುವ ಎಚ್.ಡಿ.ಕುಮಾರಸ್ವಾಮಿ, ಸಿ.ಡಿ.ಕುಮಾರಸ್ವಾಮಿ ಆಗಿದ್ದಾರೆ.  ಈಗಾಗಲೇ ಅನೇಕ ಬಾರಿ ಸಿಡಿಗಳನ್ನು ಬಿಡುಗಡೆ ಮಾಡಿದ್ದಾರೆ. ಯಾವುದೊಂದನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿಲ್ಲ. ಒಂದೂ ಯಶಸ್ವಿಯಾಗಿಲ್ಲ. ಈ ನಕಲಿ ಸಿ.ಡಿ.ಯನ್ನು ಯಾರೂ ನಂಬಲ್ಲ. ರಾಷ್ಟ್ರದ್ರೋಹಿ ಸಂಘಟನೆಗಳಿಗೆ ಬೆಂಬಲವಾಗಿ ನಿಂತಿರುವ ಕುಮಾರಸ್ವಾಮಿಗೆ ಜನರು ಛೀಮಾರಿ ಹಾಕುತ್ತಾರೆ ಎಂದು ಹರಿಹಾಯ್ದರು. 

ಕುಮಾರಸ್ವಾಮಿ ತುಂಬಾ ಕಸರತ್ತು ಮಾಡಿ ವಿಡಿಯೋ ತಯಾರಿಸಿದ್ದಾರೆ. ಮಾಡುವುದಕ್ಕೆ ಕೆಲಸ ಇಲ್ಲ ಎಂದು ಬೆಂಕಿ ಹಚ್ಚುವ ಕೆಲಸಕ್ಕೆ ಕೈಹಾಕಿದ್ದಾರೆ. ಮಂಗಳೂರಿನಲ್ಲಿ ಗಲಭೆಗಳ ನಂತರ ಪರಿಸ್ಥಿತಿ ಶಾಂತವಾಗಿದೆ. ಇಂತಹ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಪ್ರಕರಣವನ್ನು ದಿಕ್ಕು ತಪ್ಪಿಸುವುದಕ್ಕೆ ಸಿ.ಡಿ.ಬಿಡುಗಡೆ ಮಾಡಿದ್ದಾರೆ. ಅವರ ಸಿ.ಡಿ.ಗೆ ಕೆಎಫ್‌ಡಿ, ಎಸ್ ಡಿಪಿಐ ಗೂಂಡಾಗಳು ಇರುವ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿಲ್ಲ. ಮಾಜಿ ಮುಖ್ಯಮಂತ್ರಿಯೂ ಆದ ಕುಮಾರಸ್ವಾಮಿ ಅವರು, ಪೊಲೀಸರ ನೈತಿಕಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

SCROLL FOR NEXT