ರಾಜಕೀಯ

ಬಿಜೆಪಿಯಿಂದ ಕನಕಪುರ ಚಲೋ: ಉದ್ವೇಗಕ್ಕೊಳಗಾಗದಂತೆ ಡಿ.ಕೆ. ಶಿವಕುಮಾರ್ ಮನವಿ

Nagaraja AB

ಬೆಂಗಳೂರು: ಕಪಾಲಿಬೆಟ್ಟದಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ನಿರ್ಮಿಸಲು ಉದ್ದೇಶಿಸಿದ್ದ ಏಸುಪ್ರತಿಮೆ ನಿರ್ಮಾಣ ಖಂಡಿಸಿ ಜ.13ರ ಸೋಮವಾರದಂದು ಬಿಜೆಪಿ "ಕನಕಪುರ ಚಲೋ" ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದೆ.ಇದರಲ್ಲಿ ಬಿಜೆಪಿ ಕಾರ್ಯಕರ್ತರು,ಮುಖಂಡರು ಹಾಗೂ ಕೆಲ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ

 ಬಿಜೆಪಿ ಕನಕಪುರ ಚಲೋ ಖಂಡಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕನಕಪುರಕ್ಕೆ ಕೆಟ್ಟ ಹೆಸರು ತರಲೆಂದೇ ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಹೀಗಾಗಿ  ಕನಕಪುರ ಮತ್ತು ರಾಮನಗರದ ಜನತೆ ಪಕ್ಷದ ಕಾರ್ಯಕರ್ತರು ಯಾವುದೇ ಉದ್ವೇಗಕ್ಕೊಳಗಾಗದೇ ಶಾಂತಿ‌ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ಕನಕಪುರದ ಮಹಾಜನರು ಶತ-ಶತಮಾನಗಳಿಂದಲೂ ಶಾಂತಿಪ್ರಿಯರು. ಮತೀಯ ಸಾಮರಸ್ಯಕ್ಕೆ ಹೆಸರಾದವರು. ಕಪಾಲಬೆಟ್ಟದ ಯೇಸುಪ್ರತಿಮೆ ನಿರ್ಮಾಣ ವಿರೋಧಿಸುವ ನೆಪದಲ್ಲಿ ಕೆಲವು ಮತೀಯ ಶಕ್ತಿಗಳು ಪ್ರಯತ್ನಿಸುತ್ತಿವೆ. ಸುಳ್ಳು ಕಾರಣ, ಕಟ್ಟುಕತೆಗಳನ್ನು ಸೃಷ್ಟಿಸುತ್ತಿವೆ, ವದಂತಿಗಳನ್ನು ಹರಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಜ 13 ರಂದು ಕನಕಪುರ ಚಲೋ ಹೆಸರಿನಲ್ಲಿ ಕೋಮುಸಾಮರಸ್ಯ ಹಾಳು ಮಾಡಿ, ಗಲಭೆ, ಹಿಂಸಾಚಾರಕ್ಕೆ ಪ್ರೇರಣೆ ನೀಡುವುದು ಈ ಮತೀಯ ಶಕ್ತಿಗಳ ಹುನ್ನಾರವಾಗಿದೆ. ಹೀಗಾಗಿ ಯಾವುದೇ ಸಮುದಾಯವನ್ನು ಬಿಜೆಪಿ ಟೀಕಿಸಿದರೂ ಸಹ ಯಾರೂ ಯಾವುದೇ ಉದ್ವೇಗಕ್ಕೊಳಗಾಗಬಾರದು ಕಿವಿ ಮಾತು ಹೇಳಿದ್ದಾರೆ.

SCROLL FOR NEXT