ರಾಜಕೀಯ

ಆಟಗಾರರನ್ನು ಯಾವ್ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕೆಂಬುದು ಕ್ಯಾಪ್ಟನ್ ಗೆ ಬಿಟ್ಟ ವಿಚಾರ: ಎಸ್.ಎ. ರಾಮದಾಸ್

Sumana Upadhyaya

ಬೆಂಗಳೂರು: ಸಚಿವ ಸ್ಥಾನ ತಪ್ಪಿದ ಶಾಸಕರ ಸಿಎಂ ಬೊಮ್ಮಾಯಿ ಮನೆಗೆ ಪರೇಡ್ ಮುಂದುವರಿದಿದೆ. ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಬಳಿಕ ಮೈಸೂರು ಜಿಲ್ಲೆಯ ಶಾಸಕ ಎಸ್ ಎ ರಾಮದಾಸ್ ಭೇಟಿ ಕೊಟ್ಟಿದ್ದಾರೆ.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಟಗಾರನನ್ನು ಯಾವ್ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕೆಂದು ಕ್ಯಾಪ್ಟನ್ ಗೆ ಗೊತ್ತಿರುತ್ತದೆ, ಅವರಿಗೆ ಬಿಟ್ಟದ್ದು ಅವರು ತೀರ್ಮಾನ ಮಾಡುತ್ತಾರೆ, ಆಟ ಗೆಲ್ಲಬೇಕಾದವರು ಅವರೇ ಎಂದು ಬೊಮ್ಮಾಯಿಯವರ ಬಗ್ಗೆ ಹೇಳಿದ್ದಾರೆ.

2008ರಲ್ಲಿ ನನಗೆ ಸಚಿವ ಸ್ಥಾನ ನೀಡಿ ಕೊನೆಯ ಕ್ಷಣದಲ್ಲಿ ಕಿತ್ತುಕೊಂಡರು, ಆ ನಂತರದಲ್ಲಿ ಮತ್ತೆ 2010ರಲ್ಲಿ ಸಂಘದ ಹಿರಿಯರಾದ ಜಯದೇವ ಸಿಂಗ್ ಅವರು ನನಗೆ ಸಚಿವ ಸ್ಥಾನ ಕಲ್ಪಿಸಿದ್ದರು. ಕೊನೆಗೆ ಖಾತೆ ಹಂಚಿಕೆ ಮಾಡಿದ ನಂತರ ಕೊಟ್ಟಿರುವ ಖಾತೆಯಲ್ಲಿ ಒಳ್ಳೆಯ ಹೆಸರು ಮಾಡು ಎಂದು ಬುದ್ದಿವಾದ ಹೇಳಿದರು. ಕೆಲವರಿಗೆ ಖಾತೆಗಳಿಂದ ಒಳ್ಳೆಯ ಹೆಸರು ಬಂದರೆ ಇನ್ನು ಕೆಲವು ಸಚಿವರು ಮಾಡುವ ಕೆಲಸಗಳಿಂದ ಖಾತೆಗಳಿಗೆ ಉತ್ತಮ ಹೆಸರು ಬರುತ್ತದೆ ಎರಡನೇ ಸ್ಥಾನದಲ್ಲಿ ನೀನಿದ್ದೀಯಾ ಎಂದು ಹೇಳಿದ್ದರು ಎಂದು ಶಾಸಕ ರಾಮದಾಸ್ ನೆನಪು ಮಾಡಿಕೊಂಡರು.

ನಾನು ಪಕ್ಷದ ಶಿಸ್ತಿನ ಸ್ವಯಂಸೇವಕ, ಏನು ಕೊಟ್ಟರೂ, ಯಾವ ಸ್ಥಾನ ಕೊಟ್ಟರೂ, ಬಿಟ್ಟರೂ ನನ್ನ ಮನಸ್ಸಿನ ಚಿತ್ತ ಬದಲಾಗುವುದಿಲ್ಲ. ನನಗೆ ಮಂತ್ರಿ ಸ್ಥಾನ ತಪ್ಪಿಸಿದ ಬಳಿಕವೂ ನನಗೆ ಇದು ಪರೀಕ್ಷೆಯ ಕಾಲ, ಜೀವನದಲ್ಲಿ ಇದೆಲ್ಲಾ ನಡೆಯುತ್ತದೆ. ಏನೇ ಸೋಲು ಗೆಲುವು ಬಂದರೂ ಸ್ಫೂರ್ತಿಯಾಗಿ ತೆಗೆದುಕೊಳ್ಳುತ್ತೇನೆ, ನನ್ನ ಹೋರಾಟ ಪಕ್ಷದ ಒಳಗೆ, ಆಂತರಿಕವಾಗಿ ಕಚ್ಚಾಡುವುದು ನನಗೆ ಇಷ್ಟವಿಲ್ಲ.

ಲಕೋಟೆಯಲ್ಲಿ ಸಿಎಂಗೆ ನೀಡಿದ್ದೇನೆ: ಮೊನ್ನೆ ಮೈಸೂರಿಗೆ ಮುಖ್ಯಮಂತ್ರಿಗಳು ಬಂದಿದ್ದಾಗ ಯಾಕೆ ಅವರನ್ನು ಭೇಟಿ ಮಾಡಲಿಲ್ಲ ಎಂದು ಬಾಹ್ಯವಾಗಿ ಹೇಳುವುದಿಲ್ಲ, ಮುಚ್ಚಳಿಕೆ ಕವರ್ ನಲ್ಲಿ ಬರೆದು ಕೊಡುತ್ತೇನೆ ಎಂದು ಹೇಳಿದ್ದೇನೆ, ಇವತ್ತು ಮುಖ್ಯಮಂತ್ರಿಗಳಿಗೆ ಕೊಟ್ಟಿದ್ದು ಅದರಲ್ಲಿ ನನ್ನ ಆಡಳಿತದ ಅನುಭವವನ್ನು ಬರೆದು ಕೊಟ್ಟಿದ್ದೇನೆ, ವಿರಾಮವಾದಾಗ ಓದಿ, ರಾಜ್ಯದ ಮತ್ತು ಸರ್ಕಾರದ ಹಿತದೃಷ್ಟಿಯಲ್ಲಿ ನನ್ನ ಅನುಭವಗಳನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿದ್ದೇನೆ ಎಂದರು.

ಸಚಿವ ಆನಂದ್ ಸಿಂಗ್ ನನ್ನ ಹಳೆ ಸ್ನೇಹಿತ, ಮೈಸೂರಿನಲ್ಲಿ ನನ್ನ ಕ್ಷೇತ್ರದಲ್ಲಿಯೇ ಶಾಸಕರಾಗಿದ್ದಾಗ ವಾಸ ಮಾಡುತ್ತಿದ್ದರು. ನನ್ನ ಹಳೆ ಸ್ನೇಹಿತ, ರಾಜಕೀಯದಲ್ಲಿ ಒಬ್ಬೊಬ್ಬರ ನಿಲುವು ಒಂದೊಂದು ರೀತಿ ಇರುತ್ತದೆ ಎಂದರು.

SCROLL FOR NEXT