ಹಾವೇರಿ: 2023ರ ಚುನಾವಣೆಯೇ ನನ್ನ ಜೀವನದ ಕೊನೆಯ ಹೋರಾಟ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಎರಡು ವರ್ಷಗಳ ಕಾಲ ನಾಡಿನ ಪ್ರತಿ ಕುಟುಂಬದ ಸಮಸ್ಯೆ ಕೇಳಲು ಪ್ರಯತ್ನಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ಬಿಜೆಪಿಯಂತಹ ಕೆಟ್ಟ ಸರ್ಕಾರ ಬರಲು ಕಾಂಗ್ರೆಸ್ ನಾಯಕರೇ ಕಾರಣ ಎಂದು ಆರೋಪಿಸಿದ ಕುಮಾರ ಸ್ವಾಮಿ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ವಿರುದ್ಧವೂ ವಾಗ್ದಾಳಿ ನಡೆಸಿದರು.
ನಾನು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಯಾವ ನೀರಾವರಿ ಅಥವಾ ರಸ್ತೆ ಯೋಜನೆಗೆ ಅನುಮೋದನೆ ನೀಡಲಿಲ್ಲ. ಬದಲಿಗೆ ರೈತರ 25 ಸಾವಿರ ಕೋಟಿ ಸಾಲಮನ್ನಾ ಮಾಡಿದೆ. ಇದರಿಂದ ನನಗೇನು ಲಾಭವಿಲ್ಲ. ಅದೇ ನೀರಾವರಿ, ರಸ್ತೆ ನಿರ್ಮಾಣ ಯೋಜನೆಗೆ ಮುಂದಾಗಿದ್ದರೆ ಪ್ರತಿಶತ 10ರಷ್ಟು ಕಮೀಷನ್ ಬರುತ್ತಿತ್ತು ಎಂದು ಕುಮಾರಸ್ವಾಮಿ ತಿಳಿಸಿದರು