ಬೆಳಗಾವಿ: ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ರಾಜ್ಯ ನಗರಪಾಲಿಕೆಗಳ ಹಾಗೂ ಕೆಲವು ಇತರೆ ಕಾನೂನು ತಿದ್ದುಪಡಿ ವಿಧೇಯಕ ಮೇಲ್ಮನೆಯಲ್ಲಿ ಬುಧವಾರ ಅಂಗೀಕಾರಗೊಂಡವು.
ನಗರಾಭಿವೃದಿ ಸಚಿವ ಬಿ.ಎ. ಬಸವರಾಜ್ ಅವರ ಪರವಾಗಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ
ಕರ್ನಾಟಕ ಮುನ್ಸಿಪಲ್ ಕಾಯ್ದೆ 1976 ಮತ್ತುಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ 2020ನ್ನು ವಿಧಾಪರಿಷತ್ತಿನಲ್ಲಿ ಮಂಡಿಸಿದರು.
ಈ ವಿಧೇಯಕ ಮಂಡನೆಗೆ ಬಿಬಿಎಂಪಿ ಮೇಯರ್ ಆಗಿದ್ದ ಹಿರಿಯ ಸದಸ್ಯ ಪಿ.ಆರ್.ರಮೇಶ್, ತಿಪ್ಪೇಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿ, ಈ ಮಸೂದೆಯನ್ನು ಪರಿಶೀಲಿಸುವಂತೆ ಒತ್ತಾಯಿಸಿದರು. ಯಾವುದೇ ಕಾನೂನು ಇಲ್ಲದೆ ಆಸ್ತಿದಾರರಿಂದ ಬೆಂಗಳೂರಿನಲ್ಲಿ ವಸೂಲಿ ಮಾಡಿರುವ 2, 362 ಕೋಟಿ ರೂ. ತೆರಿಗೆಯನ್ನು ಸಕ್ರಮಗೊಳಿಸಲು ಈ ಮಸೂದೆಯನ್ನು ತರಲಾಗಿರುವುದರಿಂದ ಕಾನೂನು ಅಂಶಗಳಲ್ಲಿ ಈ ಮಸೂದೆ ಸರಿಯಾಗಿಲ್ಲ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ. ಬೆಂಗಳೂರಿನ ಜನರಿಂದ ವಸೂಲಿ ಮಾಡಿರುವ ಈ ತೆರಿಗೆಯನ್ನು ಯಾವುದೇ ಕಾನೂನು ತರದೇ ವಸೂಲಿ ಮಾಡಿರುವುದು ಡಕಾಯಿತಿ ಎಂದು ಕಿಡಿಕಾರಿದರು. ಕಾನೂನಾತ್ಮಕ ಅಂಶಗಳಿಗೆ ಹೊಂದಿಕೆಯಾಗದ ಇಂತಹ ಅವೈಜ್ಞಾನಿಕ ತಿದ್ದುಪಡಿ ಮಸೂದೆಗಳನ್ನು ತಂದಿದ್ದಕ್ಕಾಗಿ ನ್ಯಾಯಾಲಯವು ಈಗಾಗಲೇ ಸರ್ಕಾರಕ್ಕೆ ಹಲವು ಬಾರಿ ಕಪಾಳಮೋಕ್ಷ ಮಾಡಿದೆ. ಪರಿಷ್ಕೃತ ತೆರಿಗೆ ಅಥವಾ ಹೊಸ ತೆರಿಗೆ ವಿಧಿಸಲು ಮೊದಲೇ ಮಸೂದೆ ತರಬೇಕು, ಆದರೆ, ಈ ಹಿಂದೆ ಅಕ್ರಮವಾಗಿ ಸಂಗ್ರಹಿಸಿರುವ ತೆರಿಗೆ ಮೊತ್ತವನ್ನು ಸಕ್ರಮಗೊಳಿಸಲು ಈ ತಿದ್ದುಪಡಿ ಮಸೂದೆ ತರಲಾಗುತ್ತಿದೆ' ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್, '2015ರ ಈ ತೆರಿಗೆ ಮೊತ್ತವನ್ನು ಉಪ-ಕಾನೂನು ರೂಪಿಸಿ ಸಂಗ್ರಹಿಸಲಾಗಿದೆ. ಈ ತೆರಿಗೆಗೆ ಕಾನೂನು ತರಲು ನ್ಯಾಯಾಲಯ ಆದೇಶ ಹೊರಡಿಸಿರುವುದರಿಂದ ತಿದ್ದುಪಡಿ ವಿಧೇಯಕ ತಂದು ಮಸೂದೆ ಅಂಗೀಕರಿಸುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ವಿರೋಧ ಪಕ್ಷದವರು ಸದನದಿಂದ ಹೊರ ನಡೆದರು. ವಿರೋಧ ಪಕ್ಷದ ಸದಸ್ಯರ ಗೈರುಹಾಜರಿಯ ನಡುವೆಯೇ ಮಸೂದೆ ಅಂಗೀಕಾರವಾಯಿತು.