ರಾಜಕೀಯ

ಬಿಜೆಪಿಯಲ್ಲಿ ಗೊಂದಲ ಇರುವುದು ನಿಜ, ನಾಯಕತ್ವ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ: ಕೆ ಎಸ್ ಈಶ್ವರಪ್ಪ

Sumana Upadhyaya

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಗೊಂದಲ ಇರುವುದು ನಿಜ, ಸಣ್ಣಪುಟ್ಟ ಗೊಂದಲಗಳು ಇವೆ, ಅವುಗಳನ್ನು ಬಗೆಹರಿಸಬೇಕಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಸರ್ಕಾರದಲ್ಲಿ ಹಿರಿಯ ಸಚಿವರಾಗಿರುವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ರಾಜ್ಯ ಬಿಜೆಪಿಯಲ್ಲಿರುವ ಗೊಂದಲಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತು ಕೇಂದ್ರ ನಾಯಕರು ಒಟ್ಟಿಗೆ ಕುಳಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾಯಕತ್ವ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ, ಅದು ಯಡಿಯೂರಪ್ಪನವರಿಗೆ ಮತ್ತು ಕೇಂದ್ರ ವರಿಷ್ಠರಿಗಷ್ಟೇ ಗೊತ್ತು, ನನಗೆ ಗೊತ್ತಿಲ್ಲ ಎಂದರು.

2019ರಲ್ಲಿ ಕಾಂಗ್ರೆಸ್ -ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಆಪರೇಷನ್ ಕಮಲ ಮೂಲಕ ಕೆಡವಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂತು. ಬಿ ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಇಂದಿಗೆ ಎರಡು ವರ್ಷ ಪೂರೈಸುತ್ತಿದೆ. ಈ ಎರಡು ವರ್ಷಗಳಲ್ಲಿ ನಾಯಕತ್ವ ಬಗ್ಗೆ ಆಗಾಗ ಗೊಂದಲ, ವದಂತಿಗಳು ಕೇಳಿ ಬರುತ್ತಲೇ ಇದೆ. ಬಿಜೆಪಿ ನಾಯಕರೊಳಗೆ ಸಹ ಸಾಕಷ್ಟು ಭಿನ್ನಮತ ಕಂಡುಬಂದಿತ್ತು.

ಇಂದು ಎರಡು ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಬಿಜೆಪಿ ಸಾಧನಾ ಕಾರ್ಯಕ್ರಮವನ್ನು ವಿಧಾನಸೌಧದಲ್ಲಿ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಕೆಲಸಗಳು, ಸಾಧನೆಗಳನ್ನು ಸಾರುವ ಪುಸ್ತಕವನ್ನು ಬಿಡುಗಡೆ ಮಾಡಿ ಸಿಎಂ ಯಡಿಯೂರಪ್ಪ ಮಾತನಾಡಲಿದ್ದಾರೆ. ಅದರಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಪ್ರಸ್ತಾಪಿಸಲಿದ್ದಾರೆಯೇ ಎಂಬುದು ಕುತೂಹಲವಾಗಿದೆ.

SCROLL FOR NEXT