ರಾಜಕೀಯ

ಬಡವರ, ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ, ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತೇನೆ: ನೂತನ ಸಿಎಂ ಬಸವರಾಜ ಬೊಮ್ಮಾಯಿ  

Sumana Upadhyaya

ಬೆಂಗಳೂರು: ರಾಜ್ಯದ ಜನತೆ ಎರಡು ಬಾರಿ ಕೋವಿಡ್ ಸಂಕಷ್ಟವನ್ನು ಮತ್ತು ಅತಿವೃಷ್ಟಿಯಿಂದ ಪ್ರವಾಹ, ನೆರೆ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ, ಸರ್ಕಾರದ ಸೌಲಭ್ಯ ಸಿಗುವಂತೆ ಮತ್ತು ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸಲು ಮುಖ್ಯಮಂತ್ರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಇಂದು ರಾಜಭವನದ ಗಾಜಿನ ಮನೆಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಹೊರಗೆ ಬಂದು ಸುದ್ದಿಗಾರರ ಜೊತೆ ಮಾತನಾಡಿ, ನಾನು ಇಂದು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅನೇಕ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳು ಸಾಕಷ್ಟಿವೆ. ಈ ಸಂದರ್ಭದಲ್ಲಿ ನಮ್ಮ ಪಕ್ಷದಲ್ಲಿರುವ ಎಲ್ಲಾ ನಾಯಕರನ್ನು ಒಗ್ಗೂಡಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸುತ್ತೇನೆ, ಜನಪರ ಆಡಳಿತ ನೀಡುವುದು ನಮ್ಮ ಗುರಿಯಾಗಿದೆ ಎಂದರು.

ಇಂದು ಸಂಜೆ ದೆಹಲಿಗೆ: ಪ್ರಧಾನ ಮಂತ್ರಿಗಳ ಮೇಲೆ ದೇಶದ ಜನತೆ ಅಪಾರವಾದ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇಂದು ಸಂಜೆ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ, ಅವರ ಮತ್ತು ಕೇಂದ್ರ ವರಿಷ್ಠರ ಸಲಹೆಗಳನ್ನು ಪಡೆದು ಮುಂದಿನ ಕೆಲಸಕ್ಕೆ ಕಾಲಿಡುತ್ತೇನೆ ಎಂದರು.

ರಾಜಭವನದಿಂದ ನೇರ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಗೆ ತೆರಳಿದ ಬಸವರಾಜ ಬೊಮ್ಮಾಯಿ ಕೊಠಡಿಯೊಳಗೆ ಹೋಗುವಾಗ ನಮಸ್ಕರಿಸಿ ಹೆಜ್ಜೆಯಿಟ್ಟರು. ಇನ್ನು ಒಂದೂವರೆ ವರ್ಷಗಳ ಕಾಲ ಬಿಜೆಪಿ ಸರ್ಕಾರದ ಆಡಳಿತವಿದ್ದು 2023ರ ಏಪ್ರಿಲ್ ತಿಂಗಳ ವಿಧಾನಸಭೆ ಚುನಾವಣೆಯವರೆಗೆ ಬೊಮ್ಮಾಯಿಯವರೇ ಸಿಎಂ ಪಟ್ಟದಲ್ಲಿ ಮುಂದುವರಿಯುವ ಸಾಧ್ಯತೆಯಿದೆ. 

SCROLL FOR NEXT