ರಾಜಕೀಯ

ಲಿಂಗಾಯತ ಸಮುದಾಯದಲ್ಲಿ ಯಡಿಯೂರಪ್ಪ ಸ್ಥಾನಕ್ಕೆ ಬದಲಿಯಾಗಿ ಸಾಕಷ್ಟು ಪ್ರಬಲ ನಾಯಕರಿದ್ದಾರೆ: ಜಯಮೃತ್ಯುಂಜಯ ಸ್ವಾಮೀಜಿ

Sumana Upadhyaya

ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಮೂರನೇ ದಿನದ ಸಭೆ ಮುಂದುವರಿಯುತ್ತಿದ್ದಂತೆ ರಾಜ್ಯದಲ್ಲಿ ಸಿಎಂ ನಾಯಕತ್ವ ಬದಲಾವಣೆ ಚರ್ಚೆ ಶುಕ್ರವಾರ ಕೂಡ ಜೋರಾಗಿದೆ. 

ಬಿ ಎಸ್ ಯಡಿಯೂರಪ್ಪನವರ ಪರ-ವಿರೋಧ ಬಣದ ವಾಗ್ದಾಳಿ, ಭಿನ್ನಮತ ಮತ್ತಷ್ಟು ಹೆಚ್ಚಾಗಿದ್ದೆ, ಇವೆಲ್ಲದರ ನಡುವೆ ಅರುಣ್ ಸಿಂಗ್ ಅವರ ಲೆಕ್ಕಾಚಾರವೇನು, ಅವರು ಹೈಕಮಾಂಡ್ ಗೆ ಯಾವ ವಿಷಯಗಳನ್ನು ತಿಳಿಸಲಿದ್ದಾರೆ, ಹೈಕಮಾಂಡ್ ಗೆ ಸೇತುವೆಯಾಗಿ ಅರುಣ್ ಸಿಂಗ್ ಅವರು ಯಾವ ರೀತಿ ಕೆಲಸ ಮಾಡಲಿದ್ದಾರೆ ಎಂಬುದು ಕುತೂಹಲ.

ಈ ಮಧ್ಯೆ ಇಂದು ಮತ್ತೆ ಹೇಳಿಕೆ ನೀಡಿರುವ ಲಿಂಗಾಯತ ಸಮುದಾಯದ ಬಸವ ಜಯಮೃತ್ಯುಂಜಯ ಸ್ವಾಮಿ, ನಾವು ಸಿಎಂ ಬದಲಾವಣೆ ಮಾಡಬೇಕೆಂದು ಒತ್ತಡ ಹೇರಲು ಸಾಧ್ಯವಿಲ್ಲ, ಸಿಎಂ ಬದಲಾವಣೆ ಮಾಡುವ ಅಧಿಕಾರ ನಮಗಿಲ್ಲ, ನಾವು ಕೇಂದ್ರದ ಬಿಜೆಪಿ ನಾಯಕರಿಗೆ ಸಲಹೆ ಕೊಡಬಹುದಷ್ಟೆ ಎಂದಿದ್ದಾರೆ.

ಯಡಿಯೂರಪ್ಪನವರ ಬದಲಿಗೆ ನಾಯಕರಿಲ್ಲ ಎಂದು ಬಿಂಬಿಸುವುದು ಬೇಡ, ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲಿ ಪ್ರಬಲ ಲಿಂಗಾಯತ ನಾಯಕರು ತುಂಬಿ ತುಳುಕುತ್ತಿದ್ದಾರೆ. ಸಿಎಂ ಬದಲಾವಣೆ ಮಾಡುವುದಿದ್ದರೆ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದವರಿಗೇ ಪ್ರಾತಿನಿಧ್ಯ ನೀಡಲಿ, ನಾನು ಲಿಂಗಾಯತ ಸಮುದಾಯದ ಪ್ರಾತಿನಿಧ್ಯ ವಹಿಸುತ್ತಿರುವುದರಿಂದ, ನಮ್ಮ ಸಮುದಾಯದವರಿಗೆ ಪ್ರಾತಿನಿಧ್ಯ ಸಿಗಲಿ ಎಂದು ಹೀಗೆ ಹೇಳುತ್ತಿದ್ದೇನೆ, ಅದು ಬಿಟ್ಟರೆ ನಾನು ಸಿಎಂ ಬದಲಾವಣೆಗೆ ಒತ್ತಾಯ ಮಾಡುವುದಿಲ್ಲ, ಅವರಿಗೆ ಸಲಹೆ ಮಾತ್ರ ನೀಡಬಹುದು ಎಂದರು.

ಇಂದು ಪಕ್ಷದ ಸಂಘಟನೆ ಬಗ್ಗೆ ವಿವಿಧ ಮೋರ್ಚಾ ಅಧ್ಯಕ್ಷರ ಜೊತೆಗೆ ಅರುಣ್ ಸಿಂಗ್ ಚರ್ಚೆ ನಡೆಸುತ್ತಿದ್ದಾರೆ.

SCROLL FOR NEXT