ಕಬಿನಿ: ಹಾನಗಲ್ ನಲ್ಲಿ ಇನ್ನೂ ಅರ್ಧಕ್ಕಿಂತ ಹೆಚ್ಚು ಮತಗಳ ಎಣಿಕೆ ಬಾಕಿಯಿದೆ, ಆರಂಭದಲ್ಲಿ ನಾವು ಹಿನ್ನೆಡೆಯಲ್ಲಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಅಲ್ಪಮತಗಳ ಮುನ್ನಡೆಯನ್ನು ಸಾಧಿಸಿದ್ದಾರೆ, ಹೀಗಾಗಿ ನಾವು ಗೆಲ್ಲುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಲು ಹೆಚ್ ಡಿ ಕೋಟೆ ತಾಲ್ಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹಾನಗಲ್ ನಲ್ಲಿ ಟಿಕೆಟ್ ಕೊಡುವ ವಿಚಾರದಲ್ಲಿ ನಾವು ಎಡವಿದ್ದೇವೆ ಎಂದು ನನಗೆ ಅನಿಸುವುದಿಲ್ಲ, ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಹಿಂದಿನಿಂದಲೂ ಹಾನಗಲ್ ಕ್ಷೇತ್ರ ತೀವ್ರ ಪೈಪೋಟಿ ನೀಡುವ ಕ್ಷೇತ್ರವಾಗಿದೆ, ಅಲ್ಲಿ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆ ಹಣಾಹಣಿ ಹಿಂದಿನಿಂದಲೂ ಇದೆ ಎಂದರು.
ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ 4 ಸಾವಿರಕ್ಕೂ ಅಧಿಕ ಮತಗಳಿಂದ ಸದ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಪದ್ಮಶ್ರೀಗೆ ಪ್ರಸ್ತಾವನೆ ನೀಡಲಿ: ಹಠಾತ್ ನಿಧನರಾದ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಒತ್ತಾಯಿಸುತ್ತಿದ್ದಾರೆ, ಜನರು ಕೂಡ ಬೆಂಬಲಿಸುತ್ತಿದ್ದಾರೆ. ಪದ್ಮಶ್ರೀ ನೀಡಲು ಪ್ರಸ್ತಾವನೆ ಸಲ್ಲಿಸಲಿ, ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸಲಿದೆ ಎಂದರು.