ರಾಜಕೀಯ

ಬಿಟ್ ಕಾಯಿನ್ ಹಗರಣ: ಮಾಹಿತಿ ಬಹಿರಂಗಪಡಿಸುವಂತೆ ಸಿಎಂ ಬೊಮ್ಮಾಯಿಗೆ ಡಿ.ಕೆ. ಶಿವಕುಮಾರ್ ಆಗ್ರಹ

Manjula VN

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣ ಪ್ರಧಾನಮಂತ್ರಿ ನರೇಂದ್ರ ಮೋದಿಯರ ಗಮನಕ್ಕೂ ಬಂದಿದ್ದು, ಹಗರಣ ಸಂಬಂಧ ಮಾಹಿತಿಗಳ ಬಹಿರಂಗಪಡಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ನಂತಹ ಅಂತರಾಷ್ಟ್ರೀಯ ಮಟ್ಟದ ದೊಡ್ಡ ಹಗರಣವನ್ನು ಮುಚ್ಚಿ ಹಾಕಲು ರಾಜ್ಯ ಸರ್ಕಾರ ಹೊರಟಿದೆ. ಆರೋಪಪಟ್ಟಿ ಹಾಗೂ ಆರೋಪಿಗಳ ಹೆಸರನ್ನು ಬಹಿರಂಗಪಡಿಸಬೇಕು. ಜೊತೆಗೆ ಪಾರದರ್ಶಕ ತನಿಖೆಗೆ ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಸರ್ಕಾರ ಗೊಂದಲಹ ಹೇಳಿಕೆ ನೀಡುತ್ತಿದೆ. ರಾಜ್ಯ ಸರ್ಕಾರ ಆರೋಪ ಪಟ್ಟಿ ಸಲ್ಲಿಸಿದ್ದರೆ, ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯಕ್ಕೆ ನೀಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಇನ್ನು ರಾಜ್ಯ ಸರ್ಕಾರ 15 ದಿನಗಳಲ್ಲಿ ಈ ಪ್ರಕರಣದ ತನಿಖೆ ಮಾಡುವಂತೆ ತನಿಖಾ ಸಂಸ್ಥೆಗೆ ಪತ್ರ ಬರೆದಿರುವುದಾಗಿ ಹೇಳಿದೆ. ಈ ವರೆಗೆ ಯಾವ ತನಿಖಾ ಸಂಸ್ಥೆ ತನಿಖೆ ಮಾಡಿತ್ತು. ತನಿಖೆ ಯಾವ ಹಂತದಲ್ಲಿ ಇತ್ತು, ಯಾರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಹಾಗೂ ಎಷ್ಟು ಜನರನ್ನು ಬಂಧಿಸಲಾಗಿತ್ತು ಎಂಬ ಬಗ್ಗೆ ಮುಖ್ಯಮಂತ್ರಿಗಳು ದಾಖಲೆ ನೀಡಲಿ. ಸರ್ಕಾರದ ನಡೆ ನೋಡುತ್ತಿದ್ದರೆ ಪ್ರಕರಣ ಮುಚ್ಚಿಚ ಹಾಕಲು ಯತ್ನಿಸಿದೆ ಎಂದು ತಿಳಿಸಿದರು.

ಇದೇ ವೇಳೆ ಹಾನಗಲ್ ಉಪಚುನಾವಣೆ ಗೆಲುವು ಕುರಿತು ಮಾತನಾಡಿದ ಅವರು, ಪ್ರಚಾರದ ವೇಳೆ ಭಾಷಣ ಮಾಡಿದ ನಾವು ನಾಯಕರು ಶ್ರೇಯಸ್ಸಿಗೆ ಅರ್ಹರಲ್ಲ. ಬದಲಿಗೆ ಮತದಾರರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿ ದೇಶಕ್ಕೆ ಸಂದೇಶ ರವಾನಿಸಿದ ಕೀರ್ತಿ ಮತದಾರರಿಗೆ ಸಲ್ಲುತ್ತದೆ. ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿನ ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೇವೆ. ಇದೀಗ ಜನರೇ ಇವಿಎಂಗಳ ಮೂಲಕ ಉತ್ತರ ನೀಡಿದ್ದಾರೆಂದು ಹೇಳಿದ್ದಾರೆ.

ಕೆಲವು ವಿಶ್ಲೇಷಕರು ಕಾಂಗ್ರೆಸ್ ಅನ್ನು ಮುಳುಗುವ ದೋಣಿ ಎಂದು ಕರೆಯಲು ಪ್ರಾರಂಭಿಸಿದ್ದರು, ಆದರೆ ದೇಶಾದ್ಯಂತ ನಡೆದ ಉಪಚುನಾವಣೆಗಳ ಫಲಿತಾಂಶಗಳು ಬೇರೆಯದ್ದೇ ರೀತಿಯಲ್ಲಿ ತೋರಿಸಿವೆ. ನಮ್ಮ ಮುಂದಿನ ಗುರಿ 2023 ರ ಚುನಾವಣೆಯಾಗಿದ್ದು, ಇದಕ್ಕಾಗಿ ಸಿದ್ಧತೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈಗಾಗಲೇ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರನ್ನು ಪುನರ್‌ರಚಿಸಿ ಪಕ್ಷದ ಪುನರ್‌ಸಂಘಟನೆ ಪ್ರಕ್ರಿಯೆ ನಡೆಯುತ್ತಿದೆ. ಗುರುವಾರ ಬೆಂಗಳೂರಿನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

SCROLL FOR NEXT