ರಾಜಕೀಯ

ಪ್ರಿಯಾಂಕ್ ಖರ್ಗೆ 'ಬಿಟ್ ಕಾಯಿನ್ ಬಾಂಬ್': ಹಗರಣ ಪಾರದರ್ಶಕವಾಗಿ ತನಿಖೆಯಾದರೆ ಬೊಮ್ಮಾಯಿ ಸಿಎಂ ಪದವಿ ಕಳೆದುಕೊಳ್ಳೋದು ಗ್ಯಾರಂಟಿ!

Sumana Upadhyaya

ಕಲಬುರಗಿ: ಬಿಟ್ ಕಾಯಿನ್ ದಂಧೆ ಪ್ರಕರಣದ ತನಿಖೆ ಪಾರದರ್ಶಕವಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪದವಿ ಕಳೆದುಕೊಳ್ಳುತ್ತಾರೆ. ಬಿಜೆಪಿಯಲ್ಲಿ ಮೂರನೇ ಮುಖ್ಯಮಂತ್ರಿ ನೇಮಕವಾಗುತ್ತಾರೆ ಎಂಬ ಸ್ಫೋಟಕ ಹೇಳಿಕೆಯನ್ನು ಮಾಜಿ ಸಚಿವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ.

ಕಲಬುರಗಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಇಲಾಖೆಯ ಮಾಜಿ ಸಚಿವನಾಗಿ, ಬಿಟ್ ಕಾಯಿನ್ ವ್ಯವಹಾರದ ಬಗ್ಗೆ ತಿಳಿದುಕೊಂಡು ನಾನು ಮಾತನಾಡುತ್ತಿದ್ದೇನೆ. ಬಿಟ್ ಕಾಯಿನ್ ಹಗರಣ ನಡೆದಿರುವುದು ಬಿಜೆಪಿ ಸರ್ಕಾರದಲ್ಲಿ, ಬಿಜೆಪಿ ನಾಯಕರು ಲಂಚ ತೆಗೆದುಕೊಂಡಿರುವುದು ಬಿಟ್ ಕಾಯಿನ್ ಗಳ ಮೂಲಕ, ಸರ್ಕಾರದ ಕೆಲಸ ಮಾಡಿಕೊಡಲು ಕ್ರಿಪ್ಟೊ ಕರೆನ್ಸಿಗಳನ್ನು ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯಿದೆ.  ಬಗ್ಗೆ ಸಮಗ್ರ ಕೂಲಂಕಷ ತನಿಖೆಯಾದರೆ ಈ ಸರ್ಕಾರ ಬಿದ್ದು ಹೋಗಿ ಬಸವರಾಜ ಬೊಮ್ಮಾಯಿಯವರ ಸಿಎಂ ಪದವಿ ಹೋಗುವುದು ಖಂಡಿತ ಎಂದು ಹೇಳಿದ್ದಾರೆ.

ಪ್ರಕರಣದ ಆರೋಪಿ ಶ್ರೀಕಿ ಭಟ್ ನ್ನು ಒಮ್ಮೆ ಬಂಧಿಸಿ ಮತ್ತೊಮ್ಮೆ ಬಿಡುಗಡೆ ಮಾಡಿಸಿ ನಂತರ ಸಿಐಡಿ ತನಿಖೆ ಹೀಗೆ ನಾಟಕವಾಡುತ್ತಿದ್ದಾರೆ. ಶ್ರೀಕಿ ಭಟ್ ನ್ನು ಬಂಧಿಸಿ ಆತನ ಬಳಿಯಿದ್ದ ಬಿಟ್ ಕಾಯಿನ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳುತ್ತಾರೆ, ಹಾಗಾದರೆ ಆತನನ್ನು ಬಿಟ್ಟುಬಿಟ್ಟಿದ್ದೇಕೆ, ಆತನಿಂದ ಜಪ್ತಿ ಮಾಡಿರುವ ಬಿಟ್ ಕಾಯಿನ್ ಎಲ್ಲಿದೆ ಹಾಗಾದರೆ? ಬಿಜೆಪಿಯವರು ಬರಿ ಬಾಯಿಮಾತಿಗೆ ತನಿಖೆ ನಡೆಸುತ್ತೇವೆ ಎಂದು ಹೇಳುತ್ತಿದ್ದಾರಷ್ಟೆ, ಇದು ಕೇವಲ 200-300 ಕೋಟಿ ಹಗರಣ ಮಾತ್ರವಲ್ಲ, ಸಾವಿರಾರು ಕೋಟಿ ರೂಪಾಯಿ ಹಗರಣ, ಇದು ಕೇವಲ ನಮ್ಮ ರಾಜ್ಯಕ್ಕೆ ಸೀಮಿತವಾಗಿಲ್ಲ, ಹೊರರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಹಗರಣ ನಡೆದಿದೆ. ಡ್ರಗ್ಸ್ ದಂಧೆಯಂತೆ ಇದನ್ನು ಕೂಡ ಮುಚ್ಚಿಹಾಕಲು ಬಿಜೆಪಿ ನಾಯಕರು ನೋಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗಪಡಿಸಲಿ, ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದು, ಅಧಿಕಾರಿಗಳ ನಿರ್ದೇಶನದ ಪ್ರಕಾರವೇ ಆಗಿದೆ, ಹಗರಣದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.

SCROLL FOR NEXT