ರಾಜಕೀಯ

ಸಿಎಂ ಬದಲಾವಣೆ ವಿಚಾರ ಕಾಂಗ್ರೆಸ್ ಪಕ್ಷದ ಪಿತೂರಿಯಷ್ಟೆ, ಇನ್ನು ಒಂದೂವರೆ ವರ್ಷ ಬೊಮ್ಮಾಯಿಯವರೇ ಮುಖ್ಯಮಂತ್ರಿ: ಬಿ ವೈ ವಿಜಯೇಂದ್ರ

Sumana Upadhyaya

ದಾವಣಗೆರೆ: ಸಿಎಂ ಬದಲಾವಣೆ ಕೇವಲ ಕಪೋಲಕಲ್ಪಿತ, ರಾಜ್ಯದ ಜನತೆಯ ಹಾದಿ ತಪ್ಪಿಸಲು ಕಾಂಗ್ರೆಸ್ ಮಾಡುತ್ತಿರುವ ಕುತಂತ್ರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದ್ದಾರೆ.

ದಾವಣಗೆರೆಯಲ್ಲಿ ಇಂದು ಮಾತನಾಡಿದ ಅವರು, ಬಿಟ್ ಕಾಯಿನ್ ಕೇಸ್ ಬಗ್ಗೆ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ,ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಬದಲಾವಣೆ ವಿಚಾರ ಬಿಜೆಪಿಯ ಸುಗಮ ಆಡಳಿತವನ್ನು ಕುಂಠಿತ ಮಾಡಲು ಮಾಡುತ್ತಿರುವ ಕುತಂತ್ರವಿದು ಎಂದು ಹೇಳಿದ್ದಾರೆ.

ಬಿಟ್ ಕಾಯಿನ್ ದಂಧೆ ಬಗ್ಗೆ ಸೂಕ್ತ ತನಿಖೆಯಾಗುತ್ತಿದೆ, ಅದೇನು ಬೊಮ್ಮಾಯಿಯವರು ಸಿಎಂ ಆದ ಬಳಿಕ ನಡೆದ ಘಟನೆಯಲ್ಲ, 3-4 ವರ್ಷಗಳ ಹಿಂದಿನ ಘಟನೆ, ತನಿಖೆ ಬಳಿಕ ಯಾರು ತಪ್ಪು ಮಾಡಿದ್ದಾರೆಂದು ತಿಳಿಯುತ್ತದೆ. ಇನ್ನು ಕೆಲವು ದಿನಗಳಲ್ಲಿ ಪರಿಷತ್ ಚುನಾವಣೆ ಇದೆ, ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್ ನವರೇ ಭಾಗಿಯಾಗಿದ್ದಾರೆ, ಈಗ ಅವರೇ ಆರೋಪ ಮಾಡುತ್ತಿರುವುದು ವಿಚಿತ್ರವೆನಿಸುತ್ತದೆ ಎಂದರು.

ಇನ್ನು ಒಂದೂವರೆ ವರ್ಷ ಬಸವರಾಜ ಬೊಮ್ಮಾಯಿಯವರೇ ಸಿಎಂ ಆಗಿರುತ್ತಾರೆ. ಸಿಎಂ ಎಲ್ಲಾ ವರ್ಗದ ಜನರಿಗೆ, ಎಲ್ಲಾ ಸಮಾಜದ ಜನರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿ ವೈ ವಿಜಯೇಂದ್ರ ಹೇಳಿದರು.

SCROLL FOR NEXT