ರಾಜಕೀಯ

ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಬಿಜೆಪಿ ಸೇರ್ಪಡೆ

Manjula VN

ಕೋಲಾರ: ಕೋಲಾರದಲ್ಲಿ ಕಾಂಗ್ರೆಸ್‌ಗೆ ಭಾರೀ ಹೊಡೆತ ಬಿದ್ದಿದ್ದು, ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಮಾಜಿ ಉಪಾಧ್ಯಕ್ಷ, ಎಐಸಿಸಿ ಸದಸ್ಯ ಎನ್.ಶ್ರೀನಿವಾಸ್ ಸೇರಿದಂತೆ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಚಂದ್ರಾರೆಡ್ಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರಾದ ಡಾ ಕೆ ಸುಧಾಕರ್ ಮತ್ತು ಮುನಿರತ್ನ ಅವರು ಸಮ್ಮುಖದಲ್ಲಿ ನಿನ್ನೆ ಬಿಜೆಪಿಗೆ ಸೇರ್ಪಡೆಗೊಂಡರು.

ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಕೆ.ಎಚ್.ಮುನಿಯಪ್ಪ ಅವರ ಆಪ್ತರಾಗಿರುವ ಚಂದ್ರಾರೆಡ್ಡಿ, ಕೋಲಾರದಿಂದ ಎಂಎಲ್ಸಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್ ಎಂಎಸ್‌ಐಎಲ್‌ನ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿತ್ತು. ಇದು ಚಂದ್ರಾ ರೆಡ್ಡಿಯವರಿಗೆ ನಿರಾಸೆ ಮೂಡಿಸಿತ್ತು.

ಮೂಲಗಳ ಪ್ರಕಾರ, ಹಲವು ರಾಜ್ಯ ಕಾಂಗ್ರೆಸ್ ನಾಯಕರು ಚಂದ್ರರೆಡ್ಡಿಯನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ. ಚಂದ್ರಾರೆಡ್ಡಿಯವರು ಯಾರೊಬ್ಬರಿಗೂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಕಳೆದ 20 ವರ್ಷದಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿ ಕೆಲಸ ಮಾಡಿದ್ದ ಚಂದ್ರಾರೆಡ್ಡಿ,  6 ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯರಾಗಿ ಕೆಲಸ ಮಾಡುತ್ತಿದ್ದರು. ಚಂದ್ರಾರೆಡ್ಡಿ ಅವರು ಈ ಹಿಂದೆ ಬಂಗಾರಪೇಟೆ ಪುರಸಭೆ ಅಧ್ಯಕ್ಷರೂ ಆಗಿದ್ದರು.

ಏತನ್ಮಧ್ಯೆ, ಕೆಲವು ಹಿರಿಯ ಬಿಜೆಪಿ ನಾಯಕರು ಅವರನ್ನು ಭೇಟಿ ಮಾಡಿದ್ದು, ಶ್ರೀನಿವಾಸ್ ಮತ್ತು ಚಂದ್ರಾ ರೆಡ್ಡಿಯವರ ಮನವೊಲಿಸಿ ಬಿಜೆಪಿಗೆ ಸೇರುವಂತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಂದ್ರಾರೆಡ್ಡಿ ಹಾಗೂ ಶ್ರೀನಿವಾಸ್ ಇಬ್ಬರೂ ಜಿಲ್ಲೆಯಲ್ಲಿ ಪ್ರಬಲ ನಾಯಕರಾಗಿದ್ದು, ಇಬ್ಬರನ್ನು ಬಿಜೆಪಿಗೆ ಕರೆತರಲು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮುನಿರತ್ನ ಅವರು ಪ್ರಯತ್ನ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಶ್ರೀನಿವಾಸ್ ತಮ್ಮ ವೃತ್ತಿಜೀವನವನ್ನು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದಿಂದ ಪ್ರಾರಂಭಿಸಿದರು ಮತ್ತು ನಂತರ ಅದರ ರಾಜ್ಯಾಧ್ಯಕ್ಷರಾದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜಿಎಫ್‌ನಿಂದ ಕಾಂಗ್ರೆಸ್ ಟಿಕೆಟ್‌ನಿಂದ ಟಿಕೆಟ್ ಪಡೆದು, ಸ್ಪರ್ಧಿಸಿ ಸೋಲು ಕಂಡಿದ್ದರು.

SCROLL FOR NEXT