ರಾಜಕೀಯ

ಬೆಂಗಳೂರು ನಗರ ಜಿಲ್ಲಾ ಸಚಿವ ಹುದ್ದೆ ವಿಚಾರದಲ್ಲಿ ಭುಗಿಲೆದ್ದ ಭಿನ್ನಮತ: ಸಮಸ್ಯೆ ಶಮನಕ್ಕೆ ಸಿಎಂ ಬೊಮ್ಮಾಯಿ ಮುಂದು

Sumana Upadhyaya

ಬೆಂಗಳೂರು: ನಗರ ಉಸ್ತುವಾರಿ ಸಚಿವ ಸ್ಥಾನದ ವಿಷಯದಲ್ಲಿ ತಮ್ಮ ಸಂಪುಟದ ಸಹೋದ್ಯೋಗಿಗಳ ಮಧ್ಯೆ ಇರುವ ಭಿನ್ನಾಭಿಪ್ರಾಯಗಳ ಮಧ್ಯೆ ಸಮಸ್ಯೆಯನ್ನು ಪರಸ್ಪರ ಸೌಹಾರ್ದಯುತವಾಗಿ ಬಗೆಹರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಸಂಬಂಧಪಟ್ಟ ನಾಯಕರೊಂದಿಗೆ ಚರ್ಚೆ ನಡೆಸುತ್ತೇನೆ. ಬೆಂಗಳೂರು ನಗರ ಉಸ್ತುವಾರಿ ಸಚಿವರ ಹುದ್ದೆ ಎಷ್ಟು ಪ್ರಾಮುಖ್ಯ ಎಂದು ನನಗೆ ಗೊತ್ತಿದೆ, ಪರಸ್ಪರ ಸೌಹಾರ್ದಯುತವಾಗಿ ಬಗೆಹರಿಸುವುದಾಗಿ ಹೇಳಿದ್ದಾರೆ, ಸದ್ಯ ಬೆಂಗಳೂರು ನಗರ ಉಸ್ತುವಾರಿ ಸಚಿವ ಹುದ್ದೆ ಮುಖ್ಯಮಂತ್ರಿಗಳ ಬಳಿಯಿದೆ.

ಬೆಂಗಳೂರು ನಗರ ಉಸ್ತುವಾರಿ ಸಚಿವ ಹುದ್ದೆಯಲ್ಲಿ ಸಚಿವ ವಿ ಸೋಮಣ್ಣ ಮತ್ತು ಆರ್ ಅಶೋಕ್ ಅವರ ಮಧ್ಯೆ ಭಿನ್ನಾಭಿಪ್ರಾಯವಿರುವುದು ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿದೆ. ಈ ಬಗ್ಗೆ ವಸತಿ ಸಚಿವ ವಿ ಸೋಮಣ್ಣ ಒಪ್ಪಿಕೊಂಡಿದ್ದಾರೆ. ಜೆ ಹೆಚ್ ಪಟೇಲ್ ಸರ್ಕಾರದಲ್ಲಿ ನನಗೆ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆ ವಹಿಸಿಕೊಂಡು ಗೊತ್ತಿದೆ. ಇಂದು ಯಾರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಅದು ಆಗಬಹುದು. ನಾನು ಇದರಲ್ಲಿ ಮಧ್ಯೆ ಪ್ರವೇಶಿಸದಿದ್ದರೂ ಕೂಡ ನನ್ನ ಹಿಂದಿನ ಅನುಭವಗಳನ್ನು ಆದರಿಸಿ ನನ್ನನ್ನು ಪರಿಗಣಿಸಿ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಕೇಳಿಕೊಂಡಿದ್ದು ಹೌದು. ಬೇರೆಯವರಿಗೆ ಹುದ್ದೆ ಕೊಡುವುದಾದರೆ ನನ್ನ ಅನುಭವ ಆಧಾರದ ಮೇಲೆ ಬೇರೆಯವರ ಹೆಸರು ಸೂಚಿಸುತ್ತೇನೆ ಎಂದರು.

ವಸತಿ ಸಚಿವ ವಿ ಸೋಮಣ್ಣನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್ ಅಶೋಕ್, ನಾನು ಬೆಂಗಳೂರು ನಗರ ಉಸ್ತುವಾರಿ ಸಚಿವನಲ್ಲ. ನಗರದ ರಸ್ತೆಗಳ ಹೊಂಡ-ಗುಂಡಿಗಳನ್ನು ಮುಚ್ಚುವ ಕೆಲಸವನ್ನು ನನಗೆ ವಹಿಸಿದ್ದಾರೆ. ಅಷ್ಟೇ, ನಾನು ಯಾವುದೇ ಹಣವನ್ನು ಕೂಡ ಪಡೆದಿಲ್ಲ ಎಂದರು.

ತಮ್ಮ ಮತ್ತು ಸಚಿವ ಸೋಮಣ್ಣನವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮೊನ್ನೆ ಶುಕ್ರವಾರ ಅವರ ಜೊತೆ ಫೋನ್ ನಲ್ಲಿ ಮಾತನಾಡಿದ್ದೇನೆ, ನನ್ನ ಕಂದಾಯ ಇಲಾಖೆ ಬಹಳ ದೊಡ್ಡದು. ನನಗೆ ಸೋಮಣ್ಣನವರ ಮೇಲೆ ಅತೀವ ಗೌರವವಿದೆ. ನಾನು ಯಾವುದೇ ಹುದ್ದೆಗೆ ಬೇಡಿಕೆಯಿಡುವುದಿಲ್ಲ. ಇನ್ನು ಉಳಿದ ಸಮಯ ಸರ್ಕಾರ ಸುಗಮವಾಗಿ ನಡೆದುಕೊಂಡು ಹೋಗಬೇಕು. ಮುಖ್ಯಮಂತ್ರಿಗಳ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು.

ಇತ್ತೀಚೆಗೆ ವಿ ಸೋಮಣ್ಣನವರು ಕರೆದ ಅಧಿಕೃತ ಸಭೆಗೆ ತಾವು ಗೈರಾದ ಬಗ್ಗೆ ಕೇಳಿದಾಗ, ಆಗ ತಾವು ಚಿಕ್ಕಮಗಳೂರಿನಲ್ಲಿದ್ದೆ, ಸೋಮಣ್ಣನವರಿಗೆ ಹೇಳಿದ್ದೆ ಕೂಡ. ಮುಂದಿನ ಸಭೆಗೆ ಹಾಜರಾಗಿ ಎಂದಿದ್ದರು ಎಂದು ಆರ್ ಅಶೋಕ್ ಹೇಳಿದ್ದಾರೆ.

SCROLL FOR NEXT