ರಾಜಕೀಯ

ಚಿರತೆ ಹಿಡಿಯವುದರಲ್ಲಿ ಸಚಿವ ಗೋವಿಂದ ಕಾರಜೋಳ ಎಕ್ಸ್ ಪರ್ಟ್!

Shilpa D

ಬೆಂಗಳೂರು: ಚಿರತೆ ಹಿಡಿಯುವ ವಿಷಯ ವಿಧಾನಸಭೆಯಲ್ಲಿಂದು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಶೂನ್ಯವೇಳೆಯಲ್ಲಿ ಸದಸ್ಯರಾದ ಅಬ್ಬಯ್ಯ ಪ್ರಸಾದ್ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳಿ ಸಮೀಪದ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡು ಆ ಭಾಗದಲ್ಲಿ ಜನ ಭಯಭೀತರಾಗಿದ್ದಾರೆ.

ಶಾಲೆಗಳನ್ನು ಬಂದ್ ಮಾಡಲಾಗಿದೆ. ಚಿರತೆ ಭಯದಿಂದ ಕೂಲಿ-ಕಾರ್ಮಿಕರು ಕೆಲಸಕ್ಕೆ ಹೋಗುತ್ತಿಲ್ಲ. ಮನೆಯಲ್ಲೇ ಕೂರುವಂತಾಗಿದೆ. ಚಿರತೆ ಬೆಟ್ಟದ ಸುತ್ತಮುತ್ತ ಓಡಾಡುತ್ತಿರುವ ದೃಶ್ಯಗಳು ಪತ್ತೆಯಾಗಿವೆ. ಅದನ್ನು ಹಿಡಿಯಲು ಸಮಸ್ಯೆಯಾದರೂ ಏನು? ಪರಿಣಿತರ ಕೊರತೆ ಇದೆಯೇ? ಎಂದು ಪ್ರಶ್ನೆ ಮಾಡಿದರು.

ಸಚಿವ ಕಾರಜೋಳ ಉತ್ತರಿಸಿ ಕೂಡಲೇ ಪರಿಣಿತರ ತಂಡ ಕಳುಹಿಸಿ ಚಿರತೆ ಹಿಡಿದು ಸಮಸ್ಯೆ ಪರಿಹಾರಿಸಲಾಗುವುದು ಎಂದರು. ಆಗ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಚಿರತೆ ಹಿಡಿಯಲು ಪರಿಣಿತರ ತಂಡ ಬೇಕಿಲ್ಲ. ಕಾರಜೋಳ ಅವರೇ ಹಿಡಿಯಬಹುದು ಎಂದರು. ಆಗ ಸದನ ಕೆಲ ಕಾಲ ನೆಗೆಗಡಲಲ್ಲಿ ತೇಲಾಡಿತು.

ಉತ್ತರ ಮುಂದುವರಿಸಿದ ಕಾರಜೋಳ, ಚಿರತೆ ಹಿಡಿಯಲು ಪರಿಣಿತರ ಅವಶ್ಯಕತೆ ಇದೆ ಎಂದರು. ಇದಕ್ಕೂ ಮುನ್ನ ಶಾಸಕ ರೇಣುಕಾಚಾರ್ಯ, ತಮ್ಮ ಕ್ಷೇತ್ರದಲ್ಲೂ ಚಿರತೆ ಹಾವಳಿಯಿಂದ ಜನ ಭಯ ಭೀತರಾಗಿದ್ದಾರೆ ಎಂದು ಸರ್ಕಾರದ ಗಮನ ಸೆಳೆದರು. 

ಆಗ ಮಾಜಿ ಸ್ಪೀಕರ್ ರಮೇಶ್ ಕುಮಾರ್, ರೇಣುಕಾಚಾರ್ಯ ಕ್ಷೇತ್ರದಲ್ಲಿ ಚಿರತೆ ಹಾವಳಿ ಇದೆ ಎಂದರೆ ನಾನು ಒಪ್ಪುವುದಿಲ್ಲ. ಭಹುಶಃ ಅವರು ಸುಳ್ಳು ಹೇಳುತ್ತಿರಬಹುದು. ಏಕೆಂದರೆ ಅವರಿರುವ ಜಾಗದಲ್ಲಿ ಚಿರತೆ ಬರಲು ಸಾಧ್ಯವೇ ಇಲ್ಲ ಎಂದಾಗ ಸದನ ನಗೆಗಡಲಲ್ಲಿ ತೇಲಾಡಿತು. ಒಟ್ಟಾರೆ ವಿಧಾನಸಭೆಯ ಬೆಳಗಿನ ಕಲಾಪದಲ್ಲಿ ಚಿರತೆ ಚರ್ಚೆ ಸ್ವಾರಸ್ಯಕರವಾಗಿತ್ತು.

SCROLL FOR NEXT