ಮಡಿಕೇರಿ: ಕೊಡಗಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮೊಟ್ಟೆ ಎಸೆಯುವ ಗೂಂಡಾಗಿರಿ ರಾಜಕೀಯ ಬೇಡ. ಅಂತ್ಯ ಮಾಡುವುದು ಹೇಗೆ ಎಂದು ನಮಗೂ ಗೊತ್ತು ಎಂದು ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಮೊಟ್ಟೆ ಎಸೆಯುವ ಗೂಂಡಾಗಿರಿಯ ರಾಜಕೀಯ ಶುರುಮಾಡಬೇಡಿ. ಅದನ್ನು ಅಂತ್ಯ ಮಾಡುವುದು ಹೇಗೆ ಎಂದು ನಮಗೂ ಗೊತ್ತು. ನಮ್ಮ ಕಾರ್ಯಕರ್ತರು ನಿಮ್ಮವರಂತೆಯೇ ಬೀದಿಗಿಳಿದರೆ ನೀವು ಮನೆಯಿಂದ ಹೊರಬರುವುದು ಕೂಡ ಕಷ್ಟವಾಗಬಹುದು. ಉತ್ತರ ಪ್ರದೇಶ ಮಾದರಿ ಎಂದರೆ ಇದೆನಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: 'ಗೋ ಬ್ಯಾಕ್ ಸಿದ್ದು ಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ' ಘೋಷಣೆ; ಕೊಡಗಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಘೇರಾವ್
ಅಂತೆಯೇ, 'ನಾವು ಸಮಾಜದಲ್ಲಿ ಸಾಮರಸ್ಯ ಬಯಸುವವರು, ಎಲ್ಲ ಜಾತಿ, ಧರ್ಮದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂದು ಬಯಸುವವರು. ನಾವು. ಬಿಜೆಪಿ ಅವರು ಮತ ಧ್ರುವಿಕರಣಕ್ಕಾಗಿ ಸಮಾಜ ಒಡೆಯುವವರು. ಗೋಡ್ಸೆಗೆ ಪೂಜೆ ಮಾಡುವುದು ದೇಶಪ್ರೇಮವೇ?, ಶಿವಮೊಗ್ಗದ ಗಲಭೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರೇ ಕಾರಣ. ಸಚಿವ ಸ್ಥಾನ ಕಳೆದುಕೊಂಡು ಮನೆಯಲ್ಲಿರುವ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನ ಖಾತರಿಯೂ ಇಲ್ಲ. ಇದರಿಂದ ಹತಾಶರಾಗಿರುವ ಈಶ್ವರಪ್ಪನವರು ಆರ್ ಎಸ್ ಎಸ್ ಒಡೆಯರನ್ನು ಒಲಿಸಿಕೊಳ್ಳಲು ಇದೆಲ್ಲ ಮಾಡುತ್ತಿದ್ದಾರೆ. ಸಾಧನೆಯ ಬಲದಿಂದ ಚುನಾವಣೆಯನ್ನು ಎದುರಿಸಲಿಕ್ಕಾಗದ ಬಿಜೆಪಿ ನಾಯಕರಿಗೆ ಸುಳ್ಳು ಸುದ್ದಿ ಮತ್ತು ಆಧಾರರಹಿತ ಆರೋಪಗಳೇ ಬಂಡವಾಳ. ಹಳೆಯ ಆಟವನ್ನು ಬಿಜೆಪಿ ರಾಜ್ಯದಲ್ಲಿ ಮತ್ತೆ ಶುರುಮಾಡಿದೆ. ಈ ಸುಳ್ಳಿನ ಸರದಾರರಿಗೆ ಸತ್ಯವನ್ನು ಎದುರಿಸುವ ನೈತಿಕತೆ ಇಲ್ಲ ಎಂದರು.
ವಿ.ಡಿ.ಸಾವರ್ಕರ್ ಬಗ್ಗೆ ಅಭಿಮಾನ ಇದ್ದರೆ ಅವರ ಬಗ್ಗೆ ಪುಸ್ತಕ ಬರೆದು, ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ವಿರುದ್ಧದ ಆರೋಪಗಳಿಗೆ ಉತ್ತರ ಕೊಡಿ.. ಕೋಮುಗಲಭೆ ಹುಟ್ಟುಹಾಕಲು ಅವರ ಪೋಟೊವನ್ನು ಅಸ್ತ್ರವನ್ನಾಗಿ ಯಾಕೆ ಮಾಡುತ್ತಿದ್ದೀರಿ? ಇದನ್ನೇ ನಾನು ಪ್ರಶ್ನಿಸಿದ್ದು. ಮಹಾತ್ಮ ಗಾಂಧೀಜಿಯವರ ಪೋಟೊ ಹಾಕಿ ಜಾಹೀರಾತು ಕೊಡುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ತಮ್ಮದೇ ಪಕ್ಷದ ಕಾರ್ಯಕರ್ತರು ಗಾಂಧೀಜಿ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ಪೋಟೊ ಮೆರವಣಿಗೆ ಮಾಡಿದ್ದಾರೆ. ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ?. ಸಾವರ್ಕರ್ ಅವರನ್ನು ಹೊತ್ತು ಮೆರೆಯುತ್ತಿರುವ ಬಿಜೆಪಿ ನಾಯಕರಲ್ಲಿ ಯಾರಾದರೂ 52 ವರ್ಷಗಳ ಕಾಲ ಆರ್ ಎಸ್ ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜವನ್ನು ಯಾಕೆ ಹಾರಿಸಿರಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಚುನಾವಣೆಗೆ ಮೊದಲೊಂದು ಧರ್ಮ, ನಂತರ ಇನ್ನೊಂದು ಧರ್ಮವೇ? ಅಧಿಕಾರದಲ್ಲಿದ್ದಾಗ ವಿಭಜನೆ, ವಿಪಕ್ಷದಲ್ಲಿದ್ದಾಗ ವೀರಶೈವರ ಭಜನೆ!
ಅಲ್ಲದೆ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಪೋಟೊವನ್ನು ಪಕ್ಷದ ಕಚೇರಿಯಲ್ಲಿಯೇ ಕಸದ ಬುಟ್ಟಿಗೆ ಎಸೆದಿರುವ ಬಿಜೆಪಿ ನಾಯಕರ ಹೃದಯದೊಳಗೆ ಗಾಂಧೀಜಿಯೂ, ಇಲ್ಲ ಅಂಬೇಡ್ಕರ್ ಅವರೂ ಇಲ್ಲ. ಅವರೊಳಗೆ ಇರುವುದು ನಾಥುರಾಮ್ ಗೋಡ್ಸೆ ಮಾತ್ರ. ಈ ಸತ್ಯವನ್ನು ಮೊದಲು ಒಪ್ಪಿಕೊಳ್ಳಿ. ಬಿ.ಎಸ್ ಯಡಿಯೂರಪ್ಪ ಅವರಿಗೆ 75 ವರ್ಷ ಆಯ್ತು ಎಂದು ಮುಖ್ಯಮಂತ್ರಿ ಸ್ಥಾನದಿಂದ ನಿರ್ದಯವಾಗಿ ಕೆಳಗಿಳಿಸಿದರು. ಅವರು ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಿದ್ದರು. ಈಗ ಮತ್ತೆ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ್ದಾರೆ, ಈಗ ಅವರ ವಯಸ್ಸು ಕಡಿಮೆ ಆಯ್ತಾ? ಇದಕ್ಕೆ ಕಾರಣ ಅವರ ಮೇಲಿನ ಪ್ರೀತಿ ಅಲ್ಲ, ಸೋಲಿನ ಭಯ ಎಂದು ಲೇವಡಿ ಮಾಡಿದ್ದಾರೆ.